- 2014ರ ಮೇ ತಿಂಗಳಿನಲ್ಲಿ ಕಳುವಾಗಿದ್ದ ಆಭರಣ
- ಒಡಿಶಾದ ಧೌಲಿ ಪ್ರದೇಶದಲ್ಲಿರುವ ಗೋಪಿನಾಥಪುರದ ದೇವಸ್ಥಾನ
ದೇವಸ್ಥಾನದಿಂದ ಕಳವು ಮಾಡಿದ್ದ ಆಭರಣಗಳನ್ನು ʻಅನಾಮಧೇಯ ಕಳ್ಳ’ನೊಬ್ಬ 9 ವರ್ಷಗಳ ಬಳಿಕ ಹಿಂತಿರುಗಿಸಿರುವ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ರಾಜಧಾನಿ ಭುವನೇಶ್ವರದ ಧೌಲಿ ಪ್ರದೇಶದಲ್ಲಿರುವ ಗೋಪಿನಾಥಪುರದ ದೇವಸ್ಥಾನದಿಂದ 2014ರ ಮೇ ತಿಂಗಳಿನಲ್ಲಿ ಆಭರಣಗಳು ಕಳುವಾಗಿತ್ತು. ಕಿವಿಯೋಲೆ, ಬಳೆಗಳು, ಕೊಳಲು ಮತ್ತು ತಲೆಯ ಕವಚ ಸೇರಿದಂತೆ ಒಟ್ಟು ₹4 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳು ಕಳುವಾಗಿತ್ತು.
ಆದರೆ ಬರೋಬ್ಬರಿ 9 ವರ್ಷಗಳ ಬಳಿಕ ಕಳವುಗೈಯ್ದಿದ್ದ ಆಭರಣಗಳನ್ನು ದೇವಸ್ಥಾನಕ್ಕೆ ಹಿಂತಿರುಗಿಸಿರುವ ಕಳ್ಳ, ಆಭರಣಗಳ ಬ್ಯಾಗ್ ಜೊತೆ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ತೆರಳಿದ್ದಾನೆ.
ʻದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಆದರೆ ನಂತರದ ದಿನಗಳಲ್ಲಿ ನಾನು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಆದ್ದರಿಂದ, 9 ವರ್ಷಗಳ ನಂತರ ನಾನು ದೇವರ ಮುಂದೆ ಶರಣಾಗಲು ಮತ್ತು ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದೆ. ನಾನು ಹೆಸರು, ವಿಳಾಸ ಅಥವಾ ಗ್ರಾಮವನ್ನು ಉಲ್ಲೇಖಿಸುತ್ತಿಲ್ಲ. ನನ್ನ ಕೃತ್ಯಕ್ಕೆ ವಿಷಾದಿಸುತ್ತೇನೆ. ಕ್ಷಮಿಸಿʼ ಎಂದು ಪತ್ರದಲ್ಲಿ ಬರೆದಿದ್ದಾನೆ.
ಬೆಳ್ಳಿ ಆಭರಣಗಳಿದ್ದ ಬ್ಯಾಗ್ ಜೊತೆಗ ದೇಣಿಗೆಯಾಗಿ 201 ರೂಪಾಯಿ ಮತ್ತು ಕಳ್ಳತನಕ್ಕೆ ಪ್ರಾಯಶ್ಚಿತವಾಗಿ 100 ದಂಡ ಸೇರಿದಂತೆ ಒಟ್ಟು 301 ರೂಪಾಯಿಯನ್ನು ʻಅನಾಮಧೇಯ ಕಳ್ಳʼ ಪತ್ರದ ಜೊತೆಗಿರಿಸಿದ್ದಾನೆ ಎಂದು ದೇವಸ್ಥಾನದ ಅರ್ಚಕ ಕೈಲಾಶ್ ಪಾಂಡಾ ತಿಳಿಸಿದ್ದಾರೆ. ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ