ನೂತನ ಸಂಸತ್ ಭವನ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಉದ್ಘಾಟಿಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಗುರುವಾರ (ಮೇ 25) ಅರ್ಜಿಯೊಂದು ಸಲ್ಲಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತು ಭವನವನ್ನು ಉದ್ಘಾಟಿಸದಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ವಕೀಲ ಸಿ ಆರ್ ಜಯ ಸುಕಿನ್ ಅರ್ಜಿ ಸಲ್ಲಿಸಿದ್ದಾರೆ. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಿಂದ ರಾಷ್ಟ್ರಪತಿ ಅವರನ್ನು ಹೊರಗಿಡುವ ಮೂಲಕ ಕೇಂದ್ರ ಸರ್ಕಾರ ಭಾರತದ ಸಂವಿಧಾನವನ್ನು ಉಲ್ಲಂಘಿಸಿದೆ. ಅದರ ಬಗ್ಗೆ ಅಗೌರವ ತೋರಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಸೇರಿದಂತೆ 19 ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಿವೆ.
ಕಾಂಗ್ರೆಸ್ ಸೇರಿ ಟಿಎಂಸಿ, ಎಸ್ಪಿ, ಎಎಪಿ ಮೊದಲಾದ ಪಕ್ಷಗಳು ಈ ಕುರಿತು ಬುಧವಾರ ಜಂಟಿ ಹೇಳಿಕೆ ಹೊರಡಿಸಿದ್ದವು.
ಈ ಸುದ್ದಿ ಓದಿದ್ದೀರಾ? ಅಮೆರಿಕದ ಶ್ವೇತಭವನದ ತಡೆಗೋಡೆಗೆ ಟ್ರಕ್ ಡಿಕ್ಕಿ; ಭಾರತೀಯ ಮೂಲದ ಹಿಟ್ಲರ್ ಅಭಿಮಾನಿ ಬಂಧನ
ನೂತನ ಸಂಸತ್ತು ಭವನ ಕಟ್ಟಡದ ಉದ್ಘಾಟನೆಯನ್ನು ಮೇ 28ರಂದು ನಿಗದಿಪಡಿಸಲಾಗಿದೆ. ಪ್ರಧಾನಿ ಮೋದಿ ಅವರು ಸಂಸತ್ ಭವನ ಉದ್ಘಾಟಿಸಲಿದ್ದಾರೆ.
ಕಳೆದ ವಾರ ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅವರು ಪ್ರಧಾನಿ ಮೋದಿಗೆ ಹೊಸ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದ್ದರು.