- ಈವರೆಗೆ ರಾಷ್ಟ್ರಾದ್ಯಂತ ಒಟ್ಟು 118 ಜಿ20 ಶೃಂಗಸಭೆ ಆಯೋಜನೆ
- ಕಾಶ್ಮೀರದಲ್ಲಿ ಶೃಂಗಸಭೆ ಆಯೋಜನೆ ವಿರೋಧಿಸಿದ ಪಾಕಿಸ್ತಾನ, ಚೀನಾ
ಕಾಶ್ಮೀರ ನಗರದಲ್ಲಿ ಸೋಮವಾರದಿಂದ (ಮೇ 22) ಜಿ20 ಶೃಂಗಸಭೆ ಆರಂಭವಾಗಲಿದೆ. ಈ ಸಮ್ಮೇಳನ ಮೇ 22ರಿಂದ 24ರವರೆಗೆ ನಡೆಯಲಿದೆ.
ಈ ಸಮಾವೇಶದಲ್ಲಿ ನಾನಾ ದೇಶಗಳ ಪ್ರತಿಷ್ಠಿತ ನಾಯಕರು ಭಾಗವಹಿಸಲಿದ್ದಾರೆ. ಅವರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಭೆಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರಲ್ಲದೆ ಸೇನಾ ಸಿಬ್ಬಂದಿ ಸಹ ಜಿ20 ಶೃಂಗಸಭೆ ಸಮಾವೇಶಕ್ಕೆ ಭದ್ರತೆ ನೀಡಲಿದ್ದಾರೆ. 370ನೇ ವಿಧಿ ರದ್ದುಗೊಳಿಸಿದ ನಂತರ ಮೊದಲ ಅಂತಾರಾಷ್ಟ್ರೀಯ ಸಭೆಯನ್ನು ಕಾಶ್ಮೀರದಲ್ಲಿ ನಡೆಸಲಾಗುತ್ತಿರುವುದರಿಂದ ಶೃಂಗಸಭೆ ಮಹತ್ವ ಪಡೆದಿದೆ.
ಜಿ20 ಶೃಂಗಸಭೆ ಶೇರ್-ಎ-ಕಾಶ್ಮೀರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಈ ಸೆಂಟರ್ಗೆ ಹೋಗುವ ರಸ್ತೆಗಳಿಗೆ ಹೊಸ ರೂಪ ಕೊಡಲಾಗಿದೆ.
ಶೃಂಗಸಭೆಗೆ ಭದ್ರತೆ ಒದಗಿಸಲು ಕಡಲ ತೀರದ ಕಮಾಂಡೋಗಳು, ಎನ್ಎಸ್ಜಿ ಸೇರಿ ಪ್ರಮುಖ ಪಡೆಗಳನ್ನು ನಿಯೋಜಿಸಲಾಗಿದೆ.
ಭಯೋತ್ಪಾದಕರು ಜಿ20 ಶೃಂಗಸಭೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಬಹುದು ಎಂಬ ವರದಿಗಳ ಮಧ್ಯೆ ಸೇನೆ, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ಬಾಲ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಸಂಖ್ಯಾತ ತಂಡಗಳು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಮಾಂಡೋಗಳು, ರಾಷ್ಟ್ರೀಯ ಭದ್ರತಾ ಪಡೆ ಹಾಗೂ ಡ್ರೋಣ್ ನಿಗ್ರಹ ದಳ ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇಟ್ಟಿದೆ.
“ಈ ಸಮಾವೇಶದ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಅತಿಥಿಗಳಿಗೆ ಪರಿಚಯಿಸಬೇಕಿದೆ” ಎಂದು ಶೃಂಗಸಭೆಯ ಮುಖ್ಯ ಸಂಯೋಜಕ ಹರ್ಷ್ ವರ್ಧನ್ ಶೃಂಗ್ಲಾ ಹೇಳಿದರು.
ಜಿ20 ಶೃಂಗಸಭೆ ಮೊದಲ ಸಭೆಯನ್ನು ಫೆಬ್ರವರಿಯಲ್ಲಿ ಗುಜರಾತ್ನಲ್ಲಿ ನಡೆಸಲಾಗಿತ್ತು. ಅಂದಿನಿಂದ ಈವರೆಗೆ ನಾನಾ ರಾಜ್ಯಗಳಲ್ಲಿ ಸುಮಾರು 118 ಸಮಾವೇಶಗಳು ನಡೆದಿವೆ.
ಕಾಶ್ಮೀರದಲ್ಲಿ ನಡೆಯಲಿರುವ ಈಗಿನ ಶೃಂಗಸಭೆ ಸಮಾವೇಶದಲ್ಲಿ ಡಿಜಿಟಲೀಕರಣ, ಹಸಿರು ಪ್ರವಾಸೋದ್ಯಮ ಮತ್ತು ಗಮ್ಯಸ್ಥಾನ ನಿರ್ವಹಣೆಯಂತಹ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರದಲ್ಲಿ ಈ ಶೃಂಗಸಭೆ ನಡೆಯುವುದನ್ನು ಪಾಕಿಸ್ತಾನ ವಿರೋಧಿಸಿದೆ. ಭಾರತದ ಕಾರ್ಯಕ್ರಮ ಆಯೋಜನೆಯನ್ನು ಟೀಕಿಸಿದೆ. “ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ. ಭಾರತ ಎಲ್ಲಿ ಬೇಕಾದರೂ ಸಭೆ ನಡೆಸಬಹುದು” ಎಂದು ಭಾರತ ಉತ್ತರಿಸಿದೆ.
ಜಿ20 ಶೃಂಗಸಭೆ ಕಾಶ್ಮೀರದಲ್ಲಿ ನಡೆಯುವುದನ್ನು ಚೀನಾ ಕೂಡ ಬಹಿಷ್ಕರಿಸಿದೆ. ಚೀನಾ ಹಾಗೂ ಸೌದಿ ಅರೆಬಿಯ ಶೃಂಗಸಭೆಯ ಕಾರ್ಯಕ್ರಮಕ್ಕೆ ಭಾಗವಹಿಸಲು ತಮ್ಮ ಹೆಸರು ನೋಂದಾಯಿಸಿಕೊಂಡಿಲ್ಲ. ಟರ್ಕಿ ಶ್ರೀನಗರದಲ್ಲಿ ನಡೆಯುವ ಶೃಂಗಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.
ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್ ನಿಯಂತ್ರಿಸಲು ‘ಸುಪ್ರೀಂ’ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ ಮೋದಿ ಸರ್ಕಾರ
ಜಿ20 ಸದಸ್ಯ ರಾಷ್ಟ್ರಗಳಿಂದ ಸುಮಾರು 60 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಶ್ರೀನಗರ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಪ್ರತಿನಿಧಿಗಳು ಸಿಂಗಾಪುರದಿಂದ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.