- ಅಮೃತಸರದ ನಿವಾಸದಲ್ಲಿ ಬಲ್ವಿಂದರ್ ಗಿಲ್ ಮೇಲೆ ದಾಳಿ
- ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿರುವ ಪೊಲೀಸ್
ಪಂಜಾಬ್ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಲ್ವಿಂದರ್ ಗಿಲ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 16) ನಡೆದಿದೆ.
ಅಮೃತಸರದ ಜಂಡಿಯಾಲ ಗುರು ಪ್ರದೇಶದಲ್ಲಿರುವ ಬಲ್ವಿಂದರ್ ನಿವಾಸದಲ್ಲಿ ಈ ಘಟನೆ ನಡೆದಿದೆ. ಬಲ್ವಿಂದರ್ ಅವರು ಮನೆಯಲ್ಲಿ ಇರುವಾಗ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಇದರಿಂದ ಬಲ್ವಿಂದರ್ ಗಿಲ್ ಅವರ ಬಾಯಿಗೆ ಗಾಯವಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ.
“ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಬಲ್ವಿಂದರ್ ನಿವಾಸದ ಬಳಿ ಬಂದು ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದ ಬಲ್ವಿಂದರ್ ಬಾಯಿಗೆ ಗುಂಡು ತಗುಲಿದ್ದು ಅಪಾಯದಿಂದ ಪಾರಾಗಿದ್ದಾರೆ” ಎಂದು ಅಮೃತಸರ ಗ್ರಾಮಾಂತರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸತೇಂದರ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಬಿಐ ವಿಚಾರಣೆ ಗೌರವಿಸುತ್ತೇನೆ ಎಂದ ಅರವಿಂದ್ ಕೇಜ್ರಿವಾಲ್
“ಸದ್ಯ ಈ ಬಗ್ಗೆ ನಿವಾಸದ ಬಳಿಯಿರುವ ಸಿಸಿಟಿವಿಯನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಬಲ್ವಿಂದರ್ ಮೇಲೆ ನಡೆದ ದಾಳಿಯಲ್ಲಿ ಒಬ್ಬನ ಪಾತ್ರ ಇದೆ ಎಂದು ಇದುವರೆಗೆ ಕಂಡು ಬಂದಿದೆ” ಎಂದು ಅವರು ಹೇಳಿದರು.
ಪೊಲೀಸರು ಅಪರಿಚಿತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ), ಮತ್ತಿತರ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ.