- ಸಮಾಜವಾದಿ ಪಕ್ಷ ಏರ್ಪಡಿಸಿದ್ದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿ
- ದೆಹಲಿ ಅಧಿಕಾರಿಗಳ ನೇಮಕಾತಿ ಚುನಾಯಿತ ಸರ್ಕಾರಕ್ಕೆ ನೀಡಿ ಸುಪ್ರೀಂ ಕೋರ್ಟ್ ಆದೇಶ
ದೆಹಲಿ ಆಡಳಿತ ಸೇವೆಗಳನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೋರಾಟಕ್ಕೆ ಸಮಾಜವಾದಿ ಪಕ್ಷ (ಎಸ್ಪಿ) ಬುಧವಾರ (ಜೂನ್ 7) ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ.
ಲಖನೌದಲ್ಲಿ ಆಮ್ ಅದ್ಮಿ ಪಕ್ಷದ (ಎಎಪಿ) ಸಂಚಾಲಕರ ಜೊತೆ ಸಭೆ ನಡೆಸಿದ ಬಳಿಕ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಈ ತೀರ್ಮಾನ ಪ್ರಕಟಿಸಿದರು.
ಸಮಾಜವಾದಿ ಪಕ್ಷ ಏರ್ಪಡಿಸಿದ್ದ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಅರವಿಂದ್ ಕೇಜ್ರಿವಾಲ್ ಸಹ ಇದ್ದರು.
“ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ನಾವು ಚರ್ಚೆ ನಡೆಸಿದ್ದೇವೆ. ಕೇಂದ್ರದ ಸುಗ್ರೀವಾಜ್ಞೆ ರಾಜ್ಯಸಭೆಯಲ್ಲಿ ಮತಕ್ಕೆ ಬಂದಾಗ ಅದನ್ನು ವಿರೋಧಿಸಲು ತಮ್ಮ ಬೆಂಬಲ ನೀಡುವುದಾಗಿ ಅಖಿಲೇಶ್ ಭರವಸೆ ನೀಡಿದ್ದಾರೆ” ಎಂದು ಸಭೆಯ ನಂತರ ಅರವಿಂದ್ ಕೇಜ್ರಿವಾಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್ಪಿ ನಾಯಕ ಅಖಿಲೇಶ್ ಅವರು ಸುಗ್ರೀವಾಜ್ಞೆಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಕರೆದರು.
ಸಮಾಜವಾದಿ ಪಕ್ಷ ಎಂದಿಗೂ ಕೇಜ್ರಿವಾಲ್ ಅವರ ಪರ ಇರುತ್ತದೆ ಎಂದು ಅಖಿಲೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
“ಬಿಜೆಪಿಗೆ ಬಹುಮತ ಇಲ್ಲದ ರಾಜ್ಯಸಭೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಗ್ಗೂಡಿ ರಾಜ್ಯಸಭೆಯಲ್ಲಿ ಈ ಸುಗ್ರೀವಾಜ್ಞೆ ಸೋಲಿಸಿದರೆ ಆಗ ಇದು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮಣಿಸಲು ಉಪಾಂತ ಅಂತಿಮ ಸ್ಪರ್ಧೆ ಎನಿಸಲಿದೆ ಎಂದು ದೇಶಕ್ಕೆ ಒಂದು ಪ್ರಬಲ ಸಂದೇಶ ರವಾನಿಸಿದಂತಾಗುತ್ತದೆ” ಎಂದು ಕೇಜ್ರಿವಾಲ್ ಹೇಳಿದರು.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದುವರೆಗೆ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಎಎಪಿಗೆ ತಮ್ಮ ಬೆಂಬಲ ನೀಡಿರುವ ನಾಯಕರಾಗಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯುನ ನಾಯಕ ನಿತೀಶ್ ಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ ಕೇಜ್ರಿವಾಲ್ಗೆ ಸುಗ್ರೀವಾಜ್ಞೆ ವಿಚಾರದಲ್ಲಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ದೆಹಲಿಯ ಗ್ರೂಪ್-ಎ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಾಗಿ ಪ್ರಾಧಿಕಾರವೊಂದನ್ನು ರಚಿಸಲು ಕೇಂದ್ರ ಸರ್ಕಾರ ಮೇ 19 ರಂದು ಸುಗ್ರೀವಾಜ್ಞೆ ಪ್ರಕಟಿಸಿತು. ಇದು ಸುಪ್ರೀಂ ಕೋರ್ಟ್ ತೀರ್ಪಿನ ವಿರೋಧಿ ನಡೆ ಎಂದು ಎಎಪಿ ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ? ಟಿಪ್ಪು, ಔರಂಗಜೇಬ್ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್: ಕೊಲ್ಲಾಪುರ ಉದ್ವಿಗ್ನ
ದೆಹಲಿಯಲ್ಲಿ ಪೊಲೀಸ್, ಸಾರ್ವಜನಿಕ ಸೇವೆಗಳು ಹಾಗೂ ಭೂಮಿಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ಇತರ ಸೇವೆಗಳ ನಿಯಂತ್ರಣವನ್ನು ಚುನಾಯಿತ ಸರ್ಕಾರಕ್ಕೆ ಹಸ್ತಾಂತರಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಒಂದು ವಾರದ ನಂತರ ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆ ಹೊರಡಿಸಿದೆ.
ಮೇ 11ರ ಸುಪ್ರೀಂ ಕೋರ್ಟ್ನ ತೀರ್ಪಿಗೂ ಮುನ್ನ ದೆಹಲಿ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯು ಲೆಫ್ಟಿನೆಂಟ್ ಗೌರ್ನರ್ ಅವರ ನಿಯಂತ್ರಣದಲ್ಲಿತ್ತು.