ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಬಿಡುಗಡೆಯಾದ 11 ಅಪರಾಧಿಗಳ ಪೈಕಿ ಕೆಲವರ ಪ್ರತಿಕ್ರಿಯೆಯನ್ನು ಪಡೆಯಲು ಇಂಗ್ಲಿಷ್ ಮತ್ತು ಗುಜರಾತಿ ಪತ್ರಿಕೆಯಲ್ಲಿ ನೋಟಿಸ್ಗಳನ್ನು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮೇ 9) ಸೂಚನೆ ನೀಡಿದೆ. ಅಪರಾಧಿಗಳಿಗೆ ನೋಟಿಸ್ ನೀಡಲು ಅವರ ವಿಳಾಸದಲ್ಲಿ ಕಂಡುಬಂದಿಲ್ಲ ಎಂಬ ದೂರುಗಳಿಗೆ ಪ್ರತಿಯಾಗಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಲು ತಿಳಿಸಿದೆ.
ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಬಿ ವಿ ನಾಗರತ್ನ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠಕ್ಕೆ ತಿಳಿಸಿದ ಬಿಲ್ಕಿಸ್ ಬಾನೊ ಪರ ವಕೀಲೆ ಶೋಭಾ ಗುಪ್ತಾ ಅವರು, ಅಪರಾಧಿಗಳು ಅವರು ತಿಳಿಸಿರುವ ವಿಳಾಸದಲ್ಲಿಲ್ಲದ ಕಾರಣ ಹೊಸ ನೋಟಿಸ್ಗಳನ್ನು ನೀಡಲು ಸಾಧ್ಯವಾಗಿಲ್ಲ. ಈ ಹಿಂದೆಯೂ ಸಹ, ಔಪಚಾರಿಕ ನೋಟಿಸ್ಗಳನ್ನು ತಲುಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಪರಾಧಿಗಳ ಪರ ವಾದ ಮಾಡಿದ ವಕೀಲರು, ತಮ್ಮ ಕಕ್ಷಿದಾರರು ಊರಿನಲ್ಲಿಲ್ಲ, ಆದ್ದರಿಂದ ಅವುಗಳನ್ನು ಸ್ವೀಕರಿಸಲಿಲ್ಲ ಎಂದು ಹೇಳಿದರು.
ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ನೋಟಿಸ್ಗಳನ್ನು ತಲುಪಿಸಲು ಪೊಲೀಸರಿಗೆ ಸಹ ಸಾಧ್ಯವಾಗಲಿಲ್ಲ ಮತ್ತು ಅವರ ಮನೆಗಳಲ್ಲಿ ಲಭ್ಯವಿರುವ ಸಂಬಂಧಿಕರು ನೋಟಿಸ್ಗಳನ್ನು ಸ್ವೀಕರಿಸಲು ಸಿದ್ಧರಿಲ್ಲ. ಆರೋಪಿಗಳು ಬಿಡುಗಡೆಯಾಗಿರುವುದರಿಂದ ಕನಿಷ್ಠ ಹದಿನೈದು ದಿನಗಳಿಗೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ವರದಿ ಮಾಡಬೇಕು ಎಂಬುದು ನಮ್ಮ ಕಾಳಜಿ. ಕ್ರಿಮಿನಲ್ ಪ್ರಕರಣವಿದ್ದರೆ ವಾರಂಟ್ ಹೊರಡಿಸಬಹುದು ಎಂದು ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ ಎಂದು ಶೋಭಾ ಗುಪ್ತಾ ಪೀಠದ ಮುಂದೆ ವಾದ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ಬಿಲ್ಕಿಸ್ ಬಾನೊ ಪ್ರಕರಣ | ಅಪರಾಧಿಗಳಿಗೆ ಕ್ಷಮಾಪಣೆ ಪ್ರಶ್ನಿಸಿ ಅರ್ಜಿ; ಕೇಂದ್ರ, ಗುಜರಾತ್ಗೆ ‘ಸುಪ್ರೀಂ’ ನೋಟಿಸ್
2002ರ ಗೋಧ್ರಾ ನಂತರದ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ 11 ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 9ಕ್ಕೆ ಮುಂದೂಡಿತ್ತು.
ಏಪ್ರಿಲ್ 18ರಂದು, ಸುಪ್ರೀಂ ಕೋರ್ಟ್ ಕಳೆದ ವರ್ಷ 11 ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆಯ ಬಗ್ಗೆ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿತು. ಅಪರಾಧಿಗಳ ಅಕಾಲಿಕ ಬಿಡುಗಡೆಗೆ ಕಾರಣಗಳನ್ನು ಕೇಳಿರುವ ಸುಪ್ರೀಂ ಕೋರ್ಟ್, ಅವರ ಸೆರೆವಾಸದ ಅವಧಿಯಲ್ಲಿ ಅವರಿಗೆ ನೀಡಲಾದ ಪೆರೋಲ್ ಅನ್ನು ಸಹ ಪ್ರಶ್ನಿಸಿದೆ.
ಮಾರ್ಚ್ 27ರಂದು, ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು 2002ರ ಗೋಧ್ರಾ ಗಲಭೆಯ ಸಮಯದಲ್ಲಿ ಅವರ ಕುಟುಂಬ ಸದಸ್ಯರ ಹತ್ಯೆಯನ್ನು “ಭಯಾನಕ” ಕೃತ್ಯ ಎಂದು ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಇತರ ಕೊಲೆ ಪ್ರಕರಣಗಳಲ್ಲಿ ಅನುಸರಿಸಿದಂತೆ ಏಕರೂಪದ ಮಾನದಂಡಗಳನ್ನು ಹೊಂದಿದೆಯೇ ಎಂದು ಗುಜರಾತ್ ಸರ್ಕಾರವನ್ನು ಕೇಳಿತ್ತು.
ಬಿಲ್ಕಿಸ್ ಬಾನೊ ಅತ್ಯಾಚಾರದ ಎಲ್ಲಾ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ವಿನಾಯಿತಿ ನೀಡಿದ ಕಾರಣ, ಕಳೆದ ವರ್ಷ ಆಗಸ್ಟ್ 15ರಂದು ಆರೋಪಿಗಳೆಲ್ಲರೂ ಬಿಡುಗಡೆಯಾಗಿದ್ದರು.
ಗೋಧ್ರಾ ರೈಲು ದುರಂತದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ ಬಾನೊ ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು. ಅಲ್ಲದೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಗಲಭೆಯಲ್ಲಿ ಸಾವನ್ನಪ್ಪಿದ ಅವರ ಕುಟುಂಬದ ಏಳು ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.
ಅಪರಾಧಿಗಳ ಬಿಡುಗಡೆ ವಿರುದ್ಧ ಸಿಪಿಐಎಂ ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್, ಲಖನೌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.