- ಉದ್ಘಾಟನೆಯ ದಿನದಂದು ಲೋಕಸಭೆಯಲ್ಲಿ ಸೆಂಗೋಲ್ ರಾಜದಂಡ ಸ್ಥಾಪನೆ
- ಸಂಸತ್ತಿನ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ಸೇರಿ 20 ಪಕ್ಷಗಳು ಬಹಿಷ್ಕಾರ
ನೂತನ ಸಂಸತ್ ಭವನದಲ್ಲಿ ಸ್ಥಾಪನೆಯಾಗಲಿರುವ ತಮಿಳುನಾಡಿನ ಐತಿಹಾಸಿಕ ರಾಜದಂಡ ಸೆಂಗೋಲ್ ಈಗ ವಿವಾದದ ವಿಷಯವಾಗಿದ್ದು, ಬಿಜೆಪಿ ಹಾಗೂ ಪ್ರತಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ.
ಬ್ರಿಟಿಷ್ ಕೊನೆಯ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರು ಅವರಿಗೆ ಅಧಿಕಾರ ಹಸ್ತಾಂತರಿಸಿದ ಸಂಕೇತವಾಗಿ ರಾಜದಂಡವನ್ನು ನೀಡಿದ ಯಾವುದೇ ಉಲ್ಲೇಖಿತ ದಾಖಲೆಗಳಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ (ಮೇ 26) ಹೇಳಿದೆ.
ಕಾಂಗ್ರೆಸ್ ಹೇಳಿಕೆಯನ್ನು ಬಿಜೆಪಿ ಅಲ್ಲಗಳೆದಿದೆ. ರಾಜದಂಡವನ್ನು ನೂತನ ಸಂಸತ್ ಭವನದ ಲೋಕಸಭೆಯಲ್ಲಿ ಸಭಾಧ್ಯಕ್ಷರ ಪೀಠದ ಪಕ್ಕ ಸ್ಥಾಪಿಸಲಾಗುತ್ತದೆ.
ಸೆಂಗೋಲ್ ರಾಜದಂಡದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಅಧಿಕಾರ ಹಸ್ತಾಂತರದ ರಾಜದಂಡದ ಕುರಿತ ಮಾಹಿತಿ ಸಂಪೂರ್ಣ ಮಿಥ್ಯೆ. ಐತಿಹ್ಯ ಕುರಿತ ಎಲ್ಲ ಮಾಹಿತಿ ಕೆಲವರ ಮನಸ್ಸಿನಲ್ಲಿ ಕಲ್ಪಿತವಾಗಿ ವಾಟ್ಸಾಪ್ನಲ್ಲಿ ಹರಿದಾಡಿವೆ. ಅವುಗಳೇ ಈಗ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ” ಎಂದು ವ್ಯಂಗ್ಯವಾಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಾರ್ಯಕರ್ತರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶ ಈಡೇರಿಕೆಗೆ ರಾಜದಂಡ ಬಳಸುತ್ತಿದ್ದಾರೆ. ಇದು ತಿರುಚಿದ ಸತ್ಯಗಳನ್ನು ಕಸೂತಿ ಮಾಡುವ ಪಕ್ಷದ ಒಂದು ವಿಶಿಷ್ಟ” ಎಂದು ಕುಟುಕಿದ್ದಾರೆ.
ಮೇ 28ರಂದು ಉದ್ಘಾಟನೆಯಾಗಲಿರುವ ನೂತನ ಸಂಸತ್ ಭವನದ ಲೋಕಸಭೆಯಲ್ಲಿ ಈ ರಾಜದಂಡ ಸ್ಥಾಪಿಸಲಾಗುತ್ತದೆ.
ಜೈರಾಮ್ ರಮೇಶ್ ಅವರ ಹೇಳಿಕೆಯನ್ನು ಬಿಜೆಪಿ ನಾಯಕರಾದ ಅಮಿತ್ ಶಾ, ಜೆ ಪಿ ನಡ್ಡಾ ಖಂಡಿಸಿದ್ದಾರೆ.
“ಕಾಂಗ್ರೆಸ್ ಏಕೆ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಇಷ್ಟು ದ್ವೇಷಿಸುತ್ತದೆ? ಭಾರತದ ಸ್ವಾತಂತ್ರ್ಯವನ್ನು ಸಂಕೇತಿಸಲು ತಮಿಳುನಾಡಿನ ಪವಿತ್ರ ಶೈವ ಮಠವು ಐತಿಹಾಸಿಕ ಸೆಂಗೋಲ್ ಅನ್ನು ಪಂಡಿತ ನೆಹರು ಅವರಿಗೆ ನೀಡಿದೆ. ಅದರೆ ವಸ್ತುಸಂಗ್ರಹಾಲಯ ಮೊದಲಿಗೆ ರಾಜದಂಡವನ್ನು ಇರಿಸಿಕೊಳ್ಳಲು ನಿರಾಕರಿಸಿತ್ತು” ಎಂದು ಅಮಿತ್ ಶಾ ಹೇಳಿದ್ದಾರೆ.
ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುತ್ತಿರುವ ಪಕ್ಷಗಳು ರಾಜವಂಶದ ಆಡಳಿತ ನಡೆಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಟೀಕಿಸಿದ್ದಾರೆ. “ಆ ಪಕ್ಷಗಳ ರಾಜಪ್ರಭುತ್ವದ ವಿಧಾನಗಳು ನಮ್ಮ ಸಂವಿಧಾನದಲ್ಲಿನ ಗಣರಾಜ್ಯ ಮತ್ತು ಪ್ರಜಾಪ್ರಭುತ್ವದ ತತ್ವಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿವೆ” ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆ ಪಿ ನಡ್ಡಾ, “ಸಂಸತ್ ಉದ್ಘಾಟನಾ ಸಮಾರಂಭದ ಬಹಿಷ್ಕಾರ ಸಂವಿಧಾನ ನಿರ್ಮಾತೃಗಳಿಗೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ.
“ವಿನಯಶೀಲ ಕುಟುಂಬದ ವ್ಯಕ್ತಿಯೊಬ್ಬರ ಮೇಲೆ ಜನರು ನಂಬಿಕೆ ಇರಿಸಿರುವ ಸರಳ ಸತ್ಯವನ್ನು ನೆಹರು-ಗಾಂಧಿ ಕುಟುಂಬ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಕುಟುಕಿದ್ದಾರೆ.
ಭಾರತದ ಮೊದಲ ಪ್ರಧಾನಿ ನೆಹರು ಅವರಿಗೆ ನೀಡಿದ ಪವಿತ್ರ ಸೆಂಗೋಲ್ ದಂಡವನ್ನು ಕಾಂಗ್ರೆಸ್ ಚಿನ್ನದ ಕೋಲು ಎಂದು ಕರೆಯುವ ಮೂಲಕ ಹಿಂದೂ ಸಂಪ್ರದಾಯಕ್ಕೆ ಅಸಡ್ಡೆ ಪ್ರದರ್ಶಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿತ್ತು.
ಮೇ 28ರಂದು ನೂತನ ಸಂಸತ್ ಭವನ ಉದ್ಘಾಟನೆ ನಿಗದಿಪಡಿಸಲಾಗಿದೆ. ಪ್ರಧಾನಿ ಮೋದಿ ಇದನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಧಾನಿ ಮೋದಿ ಉದ್ಘಾಟನೆಯನ್ನು ವಿರೋಧಿಸಿ ಕಾಂಗ್ರೆಸ್ ಸೇರಿ 20 ಪ್ರತಿಪಕ್ಷಗಳು ಉದ್ಘಾಟನಾ ಸಮಾರಂಭ ಬಹಿಷ್ಕರಿಸಿವೆ. ಆದರೆ ಏಳು ಪ್ರತಿಪಕ್ಷಗಳು ಸಮಾರಂಭದಲ್ಲಿ ಭಾಗವಹಿಸುವುದಾಗಿ ಹೇಳಿವೆ.
ಈ ಸುದ್ದಿ ಓದಿದ್ದೀರಾ? ಯುಪಿ ಮೇಲೆ ಕರ್ನಾಟಕದ ಪ್ರಭಾವ; ವಿರೋಧಿ ಪಾಳಯದಲ್ಲಿ ಬದಲಾಗುತ್ತಿದೆ ರಾಜಕೀಯ ಸಮೀಕರಣ
ಬ್ರಿಟಿಷ್ ಕೊನೆಯ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಅಧಿಕಾರ ಹಸ್ತಾಂತರದ ಬಗ್ಗೆ ಕೇಳುತ್ತಾರೆ. ಆಗ ನೆಹರು ಅವರು ಭಾರತದ ಕೊನೆಯ ಗೌರ್ನರ್ ಜನರಲ್ ಆಗಿದ್ದ ತಮಿಳುನಾಡಿನ ಸಿ ರಾಜಗೋಪಾಲಚಾರಿ ಅವರಲ್ಲಿ ಸಲಹೆ ಕೇಳುತ್ತಾರೆ. ಆಗ ರಾಜಗೋಪಾಲಚಾರಿ ಅವರು ತಮಿಳುನಾಡಿನ ಚೋಳ ರಾಜರ ಸಂಪ್ರದಾಯದ ಅಧಿಕಾರ ಹಸ್ತಾಂತರದ ಸೆಂಗೋಲ್ ರಾಜದಂಡದ ಬಗ್ಗೆ ತಿಳಿಸುತ್ತಾರೆ. ನೆಹರು ಅವರಿಗೆ ರಾಜದಂಡದ ಮೂಲಕ ಅಧಿಕಾರ ಹಸ್ತಾಂತರದ ನಂತರ ರಾಜದಂಡವು ಅಲಹಾಬಾದ್ನ ವಸ್ತುಸಂಗ್ರಹಾಲಯದಲ್ಲಿತ್ತು ಎಂದು ಬಿಜೆಪಿ ಹೇಳಿದೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]