- ಕೊರಪುಳ ರೈಲ್ವೆ ಸೇತುವೆ ಬಳಿ ಎಕ್ಸ್ ಪ್ರೆಸ್ ರೈಲು ಸಂಚಾರ ವೇಳೆ ಘಟನೆ
- ಕೋಯಿಕ್ಕೋಡ್ ಆಸ್ಪತ್ರೆ ಸೇರಿ ನಾನಾ ಆಸ್ಪತ್ರೆಗಳಿಗೆ ಗಾಯಾಳುಗಳು ದಾಖಲು
ಎಕ್ಸ್ಪ್ರೆಸ್ ರೈಲು ಸಂಚಾರದ ವೇಳೆ ಅಪರಿಚಿತ ಸಹ ಪ್ರಯಾಣಿಕರ ದಾಳಿ ಮಾಡಿದ ಗಂಟೆಗಳ ನಂತರ ಕೇರಳದ ಕೋಯಿಕ್ಕೋಡ್ ಬಳಿಯ ಎಲಾಥುರ್ ರೈಲ್ವೆ ನಿಲ್ದಾಣದ ಹಳಿಗಳ ಮೇಲೆ ಮೂವರ ಶವ ಪತ್ತೆಯಾಗಿದೆ ಎಂದು ಸೋಮವಾರ (ಏಪ್ರಿಲ್ 3) ವರದಿಯಾಗಿದೆ.
ಭಾನುವಾರ (ಏಪ್ರಿಲ್ 2) ರಾತ್ರಿ ರೈಲು ಹಳಿಗಳಲ್ಲಿ ಮಹಿಳೆ, ಮಗು ಹಾಗೂ ಪುರುಷನ ಶವ ಪತ್ತೆಯಾಗಿದೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಭಾನುವಾರ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ದಾಳಿ ಘಟನೆ ನಂತರ ಮೃತರು ರೈಲಿನಿಂದ ಕಾಣೆಯಾಗಿದ್ದರು.
ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲು ಭಾನುವಾರ ರಾತ್ರಿ 9.45ರ ಸುಮಾರಿಗೆ ಕೋಯಿಕ್ಕೋಡ್ ನಗರ ದಾಟಿ ಕೊರಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ ರೈಲಿನಲ್ಲಿ ಅಪರಿಚಿತ ವ್ಯಕ್ತಿ ಸಹ ಪ್ರಯಾಣಿಕನೊಬ್ಬನ ಮೇಲೆ ದಾಳಿ ಮಾಡಿದ್ದಾನೆ. ನಂತರ ಆತನಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ರೈಲಿನಲ್ಲಿದ್ದ ಇತರ ಎಂಟು ಮಂದಿಗೆ ಸುಟ್ಟ ಗಾಯಗಳಾದವು.
ಘಟನೆಯ ನಂತರ ಅಪರಿಚಿತ ವ್ಯಕ್ತಿಯು ಅಲ್ಲಿಂದ ಪರಾರಿಯಾದನು. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಎಕ್ಸ್ಪ್ರೆಸ್ ರೈಲು ಕಣ್ಣೂರು ತಲುಪಿದಾಗ ಅದರಲ್ಲಿದ್ದ ಮಹಿಳೆ ಹಾಗೂ ಮಗು ನಾಪತ್ತೆಯಾಗಿದ್ದರು.
“ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಮಹಿಳೆ ಹಾಗೂ ಮಗುವನ್ನು ಹುಡುಕುತ್ತಿದ್ದ. ಮಹಿಳೆಯ ಹೆಜ್ಜೆ ಗುರುತು, ಆಕೆಯ ಮೊಬೈಲ್ ಫೋನ್ ಪತ್ತೆಯಾಗಿದೆ” ಎಂದು ಕಣ್ಣೂರಿನಲ್ಲಿ ಪ್ರಯಾಣಿಕನೊಬ್ಬ ಮಾಧ್ಯಮಗಳಿಗೆ ತಿಳಿಸಿದರು.
ರೈಲು ಸಂಚಾರ ವೇಳೆ ನಾಪತ್ತೆಯಾಗಿದ್ದವರ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ನಗರ ಪೊಲೀಸರು ಹುಡುಕಾಟ ನಡೆಸಿದರು. ಶೋಧ ನಡೆಸುವಾಗ ರೈಲ್ವೆ ಹಳಿಗಳ ಮೇಲೆ ಮಹಿಳೆ, ಮಗ, ನಡು ವಯಸ್ಸಿನ ಪುರುಷನ ಶವ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಸರ್ವಾಧಿಕಾರ ವಿರುದ್ಧದ ಒಂದು ಕ್ರಾಂತಿ: ನವಜೋತ್ ಸಿಂಗ್ ಸಿಧು
ಮೃತರು ರೈಲಿನಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಎಕ್ಸ್ಪ್ರೆಸ್ ರೈಲು ಬೆಂಕಿ ದಾಳಿಯಲ್ಲಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದು ಕೋಯಿಕ್ಕೋಡ್ ಸೇರಿ ನಾನಾ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.