- ರಕ್ಬರ್ ಖಾನ್ ಪ್ರಕರಣದಲ್ಲಿ ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ
- ಸಾಕ್ಷ್ಯಾಧಾರಗಳ ಕೊರತೆಯಿಂದ ನವಲ್ ಕಿಶೋರ್ ಖುಲಾಸೆ
ರಕ್ಬರ್ ಖಾನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ದೋಷಿ ಎಂದು ರಾಜಸ್ಥಾನದ ಅಲ್ವಾರ್ ನ್ಯಾಯಾಲಯ ಗುರುವಾರ (ಮೇ 25) ತೀರ್ಪು ನೀಡಿದೆ.
ಹತ್ಯೆ ಪ್ರಕರಣದಲ್ಲಿ ದೋಷಿಗಳಾದ ನಾಲ್ವರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಒಬ್ಬ ಆರೋಪಿಯ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಆತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ನರೇಶ್, ವಿಜಯ್, ಪರಂಜೀತ್ ಹಾಗೂ ಧರ್ಮೇಂದ್ರ ಎಂಬ ಆರೋಪಿಗಳನ್ನು ರಕ್ಬರ್ ಖಾನ್ ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ಪ್ರಕಟಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುನೀಲ್ ಕುಮಾರ್ ಗೋಯಲ್ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಪ್ರಕರಣದಲ್ಲಿ ನವಲ್ ಕಿಶೋರ್ ಶರ್ಮಾ ಎಂಬ ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳು ದೊರೆಯಲಿಲ್ಲ. ಈ ಹಿನ್ನೆಲೆ ಆತನನ್ನು ಖುಲಾಸೆಗೊಳಿಸಲಾಯಿತು. ಈತ ವಿಶ್ವ ಹಿಂದೂ ಪರಿಷತ್ನ ಸದಸ್ಯನಾಗಿದ್ದಾನೆ.
2018ರ ಜುಲೈ 20 ರಂದು ಹರಿಯಾಣ ನಿವಾಸಿ ರಕ್ಬರ್ ತಮ್ಮ ಸ್ನೇಹಿತ ಅಸ್ಲಾಂ ಅವರೊಡನೆ ಅಲ್ವಾರ್ನ ಲಾಲವಾಂಡಿ ಬಳಿಯ ಅರಣ್ಯ ಪ್ರದೇಶದ ಮೂಲಕ ಎರಡು ಹಸುಗಳನ್ನು ಹಿಡಿದು ಸಾಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು.
ರಕ್ಬರ್ ಖಾನ್ ಹಾಗೂ ಅವರ ಸ್ನೇಹಿತ ದನ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುಂಪು ಹಲ್ಲೆ ನಡೆಸಿತ್ತು. ಅಸ್ಲಾಂ ಗುಂಪಿನಿಂದ ತಪ್ಪಿಸಿಕೊಂಡರು. ರಕ್ಬರ್ ಅವರಿಗೆ ಗಂಭೀರ ಗಾಯಗಳಾಗಿದ್ದವು.
ದನ ಕಳ್ಳಸಾಗಣೆ ಆರೋಪದಲ್ಲಿ ರಕ್ಬರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ತೀವ್ರ ಗಾಯಗಳಿಂದ ರಕ್ಬರ್ ಮೃತಪಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ನೂತನ ಸಂಸತ್ ಭವನ ಉದ್ಘಾಟನೆ | ಆಹ್ವಾನ ಸ್ವೀಕರಿಸಿದ ಬಿಜೆಡಿ, ವೈಎಸ್ಆರ್ಸಿಪಿ
ಈ ಹಿಂದೆ ಪೊಲೀಸರು ಪ್ರಕರಣದಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ನಾಲ್ವರನ್ನು ಆರೋಪಿಗಳೆಂದು ಹೆಸರಿಸಿತ್ತು.
ಗುಂಪಿನ ಹಲ್ಲೆಯಿಂದ ರಕ್ಬರ್ ಮೈಮೇಲೆ 12 ಕಡೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಭಾರೀ ಪ್ರಮಾಣದ ರಕ್ತ ಸ್ರಾವದಿಂದಲೇ ರಕ್ಬರ್ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿ ತಿಳಿಸಿತ್ತು.
ರಕ್ಬರ್ ಖಾನ್ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.