- ಬಂಜಾರ ಸಮುದಾಯದ ತಿಪ್ಪೇಸ್ವಾಮಿ ಮಠಾಧೀಶರಿಂದ ಯತ್ನ
- ಮುಖ್ಯಮಂತ್ರಿಯ ತವರು ಕ್ಷೇತ್ರದಲ್ಲಿಯೇ ನಡೆಯಿತು ಘಟನೆ
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಗೆ ಬಂಜಾರ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಇದೀಗ, ಸ್ವಾಮೀಜಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾವೇರಿಯ ಶಿಗ್ಗಾಂವ್ ಪಟ್ಟಣದಲ್ಲಿ ಗುಂಡೂರು ಗ್ರಾಮದ ತಿಪ್ಪೇಸ್ವಾಮಿ ಎನ್ನುವ ಸ್ವಾಮೀಜಿಯ ನೇತೃತ್ವದಲ್ಲಿ ಬಂಜಾರ ಸಮುದಾಯ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ, ಅಂಬೇಡ್ಕರ್ ಪ್ರತಿಮೆ ಬಳಿ ಸ್ವಾಮೀಜಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿಯೇ ಘಟನೆ ನಡೆದಿದ್ದು, ರಾಜಕೀಯ ಕುತೂಹಲ ಕೆರಳಿಸಿದೆ.
ಬಿಜೆಪಿ ಸರ್ಕಾರ ಒಳಮೀಸಲಾತಿ ನೀಡಿ ತಮ್ಮ ಸಮುದಾಯಕ್ಕೆ ಅನ್ಯಾಯ ಎಸಗಿದೆ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸುದೀಪ್, ದರ್ಶನ್ ಇಂದು ಬಿಜೆಪಿ ಸೇರುವ ಸಾಧ್ಯತೆ
ಘಟನೆ
ಪ್ರತಿಭಟನಾ ಮೆರವಣಿಗೆ ಮುಗಿದ ಬಳಿಕ ತಿಪ್ಪೇಸ್ವಾಮಿ ಅವರು ಅಂಬೇಡ್ಕರ್ ಪ್ರತಿಮೆಯ ಮುಂದಿನ ಮೆಟ್ಟಿಲುಗಳ ಮೇಲೆ ಹತ್ತಿ, ಮಾಲೆ ಹಾಕುವ ನೆಪದಲ್ಲಿ ಮೆಟ್ಟಿಲಿನ ‘ಗ್ರಿಲ್’ಗೆ ನೇಣು ಹಾಕಿಕೊಳ್ಳಲು ಯತ್ನಿಸಿದರು.
ತಾವು ಧರಿಸಿದ್ದ ಕಾವಿ ವಸ್ತ್ರದಲ್ಲೇ ನೇಣು ಬಿಗಿದುಕೊಳ್ಳಲು ಯತ್ನಿಸಿದರು. ತಕ್ಷಣಕ್ಕೆ ಪೊಲೀಸರು ಮತ್ತು ಪ್ರತಿಭಟನಾಕಾರರು ಅವರನ್ನು ರಕ್ಷಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಪಯಾದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, “ಹಿಂದೆ ಜಯಮೃತ್ಯುಂಜಯ ಸ್ವಾಮಿಗಳನ್ನು ಬೀದಿಯಲ್ಲಿ ಕೂರಿಸಿದ್ದಲ್ಲದೆ ನಿಂದಿಸಿ ಅವಮಾನಿಸಿತ್ತು ಬಿಜೆಪಿ. ವಾಲ್ಮೀಕಿ ಶ್ರೀಗಳನ್ನು ನೂರಾರು ದಿನ ಬೀದಿಯಲ್ಲಿ ಕೂರಿಸಿ ಅವಮಾನಿಸಿತ್ತು ಬಿಜೆಪಿ. ಈಗ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿ ಬಂಜಾರ ಶ್ರೀಗಳ ಜೀವ ತೆಗೆಯಲು ಹೊರಟಿದೆ” ಎಂದು ಹೇಳಿದೆ.
ಬಂಜಾರ ಸಮುದಾಯದ ಕೂಗು ಕೇಳದಷ್ಟು ಸರ್ಕಾರ ಕಿವುಡಗಿದೆಯೇ ಎಂದು ಪ್ರಶ್ನಿಸಿದೆ.