- ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ
- ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿಗೆ ಸೋಲಾಗಿದೆ
ಪಕ್ಷದೊಳಗಿನ ಕೆಲವರ ರಾಜಿ ರಾಜಕಾರಣ ಫಲವಾಗಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಯ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದ ಹೆಸರು ಹೇಳಲಿಚ್ಚಿಸದ ಕೆಲ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದರು.
ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಸೋತಿದೆ. ಅವರುಗಳು ಅಂತಹ ನಡೆ ಇಡದಿದ್ದಿದ್ದರೆ ನಾವಿಂದು ವಿಪಕ್ಷದಲ್ಲಿ ಕೂರಬೇಕಾಗಿರಲಿಲ್ಲ ಎಂದರು.
ಮತ್ತೊಂದೆಡೆ ಇದೇ ರೀತಿಯ ಅಭಿಪ್ರಾಯವನ್ನು ವಲಸೆ ಬಿಜೆಪಿಗೆ, ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಕೂಡ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದರಿಂದ ನನ್ನನ್ನೂ ಒಳಗೊಂಡಂತೆ ಕೆಲವರ ಸೋಲಿಗೆ ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಲ್ಲಿದ್ದಾಗ ನಾನು ಮೂರು ಬಾರಿ ಗೆದ್ದಿದ್ದೇನೆ. ಬಿಜೆಪಿ ಸೇರಿ ಎರಡು ಬಾರಿ ಸ್ಪರ್ಧಿಸಿ ಎರಡೂ ಬಾರಿಯೂ ಸೋತಿದ್ದೇನೆ. ಸುಧಾಕರ್ ಚುನಾವಣೆಯಲ್ಲಿ ತಾನೂ ಸೋತ, ನಮ್ಮನ್ನೂ ಸೋಲಿಸಿದ. ಉಸ್ತುವಾರಿ ಸಚಿವ ಸ್ಥಾನವನ್ನು ಸುಧಾಕರ್ ಸರಿಯಾಗಿ ನಿಭಾಯಿಸಿಲ್ಲ.
ಈ ಸುದ್ದಿ ಓದಿದ್ದೀರಾ?:ಕುಡಿಯುವ ನೀರಿನ ಸಮಸ್ಯೆ; ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ
ಆತ ಎಂದೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ, ಹೀಗಾಗಿ ಆತನಿಂದಲೇ ನಾನು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲುವಂತಾಯ್ತು. ಇದಕ್ಕೆ ಸುಧಾಕರ್ ಕಾರಣ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.