ಕೋಮುವಾದ ತಡೆಗೆ ಪೊಲೀಸ್ ಇಲಾಖೆಯಲ್ಲಿ ವಿಭಾಗ ರಚಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿರುವ ಬೆನ್ನಲ್ಲೇ, ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಪೊಲೀಸರು ಹಣೆಗೆ ಕುಂಕುಮ ಇಡುವಂತಿಲ್ಲವೆಂದು ಸೂಚಿಸಲಾಗಿದೆ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, “ಪೊಲೀಸರು ಹಣೆಗೆ ಕುಂಕುಮ ಇಡಬಾರದೆಂದು ಎಲ್ಲೂ ಹೇಳಿಲ್ಲ. ಬೊಟ್ಟು, ವಿಭೂತಿ ಏನು ಬೇಕಾದರೂ ಇಟ್ಟುಕೊಳ್ಳಬಹುದು” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರವೇಶ್ವರ್, “ಪೊಲೀಸರು ಹಣೆಗೆ ತಿಲಕ ಇಡಬಾರದೆಂದು ಹೇಳಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಪೊಲೀಸರಿಗೆ ತಮ್ಮದೇ ಆದ ನಿಯಮಗಳಿವೆ, ಸಮವಸ್ತ್ರ ಇರುತ್ತದೆ. ಅವುಗಳ ವ್ಯಾಪ್ತಿಯಲ್ಲಿ ಅವರು ಕೆಲಸ ಮಾಡಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು” ಎಂದು ತಿಳಿಸಿದ್ದಾರೆ.
ಕೋಮುವಾದ ತಡೆಯ ಬಗ್ಗೆ ಮಾತನಾಡಿದ ಅವರು, “ಕೋಮುವಾದ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳಲ್ಲೂ ಕೋಮುವಾದವಿದೆ. ಅದನ್ನು ತಡೆಯಲು ಪೊಲೀಸ್ ಇಲಾಖೆಯಲ್ಲಿ ವಿಭಾಗವನ್ನು ರಚಿಸುತ್ತಿದ್ದೇವೆ. ಕೋಮು ಹಿಂಸಾಚಾರಕ್ಕೆ ಯಾರು ಪ್ರಚೋದನೆ ನೀಡುತ್ತಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಆ ವಿಭಾಗ ಮಾಡುತ್ತದೆ” ಎಂದು ಹೇಳಿದ್ದಾರೆ.