- ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಜೆಡಿಎಸ್ ಒತ್ತಾಯ
- ಕರ್ನಾಟಕ ಗಡಿಯೊಳಗೆ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ
ರಾಜ್ಯದ ಗಡಿಯೊಳಗಿನ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಿರುವ ಕುರಿತು ಜೆಡಿಎಸ್ ಪ್ರತಿಕ್ರಿಯೆ ನೀಡಿದ್ದು, “ಸ್ವಾಭಿಮಾನ ಇಲ್ಲದ ಅಧಿಕಾರ ತೃಣಕ್ಕೆ ಸಮ!” ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದೆ.
ಮಹಾರಾಷ್ಟ್ರ ಸರ್ಕಾರದ ಗಡಿಯೊಳಗಿರುವ ಸುಮಾರು 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ.
“ಕರ್ನಾಟಕ ಗಡಿಯೊಳಗಿರುವ 865 ಹಳ್ಳಿಗಳಿಗೂ ಅನ್ವಯವಾಗುವಂತೆ ಜನಾರೋಗ್ಯ ಯೋಜನೆ ಜಾರಿಮಾಡಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಸರ್ಕಾರ ಆದೇಶ ಹೊರಡಿಸಿದೆ. ದುರಹಂಕಾರದ ಮದ ಏರಿದರೆ, ವಿವೇಚನೆ ಸತ್ತುಹೋಗುತ್ತದೆ ಎಂಬುದಕ್ಕೆ ಅವರ ಈ ನಡೆಯೇ ಸಾಕ್ಷಿ” ಎಂದು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಮಹಾ’ ವಿಮೆ | ಆದೇಶ ವಾಪಾಸು ಪಡೆಯದಿದ್ದರೆ ಪರಿಣಾಮ ನೆಟ್ಟಗಾಗದು ಎಂದ ಸಿದ್ದರಾಮಯ್ಯ
“ಕನ್ನಡಿಗರು ಮತ್ತು ಇಲ್ಲಿನ ಕಳಪೆ ಬಿಜೆಪಿ ಸರ್ಕಾರದ ಆಕ್ಷೇಪವನ್ನು ಸಾರಾಸಗಟಾಗಿ ಕಡೆಗಣಿಸಲಾಗಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಸ್ವತಃ ಬಿಜೆಪಿ ಪಕ್ಷದವರೇ ಆದ ದೇಶದ ಗೃಹ ಸಚಿವ ಅಮಿತ್ ಶಾ ‘ಗಡಿ ತಂಟೆ ತೀರ್ಪು ಬರುವವರೆಗೂ ಹಸ್ತಕ್ಷೇಪ ಸಲ್ಲ’ ಎಂದು ಸಂಧಾನ ಸಭೆಯಲ್ಲಿ ಹೇಳಿದ್ದರು. ಅವರ ಮಾತಿಗೂ ಮಹಾರಾಷ್ಟ್ರ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ” ಎಂದು ಹೇಳಿದ್ದಾರೆ.
“ಮಹಾರಾಷ್ಟ್ರದ ಸರ್ಕಾರ ಕೇಂದ್ರದ ಎಲ್ಲ ಸೂಚನೆಗಳನ್ನು ಗಾಳಿಗೆ ತೂರಿದೆ. ಇದು ಒಕ್ಕೂಟ ವ್ಯವಸ್ಥೆ ವಿರೋಧಿತನದ ಪರಮಾವಧಿ” ಎಂದು ಟ್ವೀಟ್ ಮಾಡಿದೆ.
“ಇಡೀ ಆಡಳಿತವನ್ನೇ ನಿಸ್ತೇಜ ಮಾಡಿರುವ ಬಿಜೆಪಿ ಸರ್ಕಾರ ಈಗಲೂ ಕಣ್ಣುಮುಚ್ಚಿ ಕುಳಿತರೆ ಕನ್ನಡಿಗರ ಅಸ್ಮಿತೆ ಹಾಳುಗೆಡವಿದಂತೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಬೆನ್ನು ಮೂಳೆ ಸದೃಢವಾಗಿದ್ದರೆ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಆಗ್ರಹಿಸಿದ್ದಾರೆ.
“ನಿಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ. ಸ್ವಾಭಿಮಾನ ಇಲ್ಲದ ಅಧಿಕಾರ ತೃಣಕ್ಕೆ ಸಮ!” ಎಂದು ಜೆಡಿಎಸ್ ಟೀಕಿಸಿದೆ.