- ಗೋವಿಂದ ರಾಜನಗರದಲ್ಲಿ ಪ್ರಿಯಾಕೃಷ್ಣ ಪರ ಪ್ರಿಯಾಂಕಾ ಗಾಂಧಿ ಪ್ರಚಾರ
- ರಾಜ್ಯದ ಹಲವೆಡೆ ಪಕ್ಷಗಳ ಪರ ಸ್ಟಾರ್ ಪ್ರಚಾರಕರಿಂದ ಭರ್ಜರಿ ಕ್ಯಾಂಪೇನ್
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಇದರ ಜೊತೆ ಜೊತೆಗೆ ಇಂದು (ಮೇ8) ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೂ ತೆರೆ ಬೀಳಲಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ ವರಿಷ್ಠ ನಾಯಕರಾದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿ ಮತದಾರರನ್ನು ಭೇಟಿ ಮಾಡಲಿದ್ದಾರೆ. ಮೊದಲಿಗೆ ಬೆಂಗಳೂರಿನ ವಿಜಯನಗರದಲ್ಲಿ ರೋಡ್ ಶೋ ನಡೆಸಲಿರುವ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಪ್ರಿಯಾಕೃಷ್ಣ ಪರ ಮತಯಾಚಿಸಲಿದ್ದಾರೆ.
ಮಧ್ಯಾಹ್ನ 12ಕ್ಕೆ ಆರಂಭವಾಗಲಿರುವ ರೋಡ್ ಶೋ ಜಿಟಿ ಮಾಲ್ ನಿಂದ ಆರಂಭಗೊಂಡು ಪೈಪ್ ಲೇನ್ ರಸ್ತೆವರೆಗೆ ಹಲವು ಮಾರ್ಗಗಳಲ್ಲಿ ಸಂಚರಿಸಲಿದೆ. ಇದಾದ ಬಳಿಕ ಚಿಕ್ಕಪೇಟೆಯಲ್ಲೂ ಪ್ರಿಯಾಂಕಾಗಾಂಧಿ ರೋಡ್ ಶೋ ನಡೆಸಲಿದ್ದಾರೆ.
ಇನ್ನು ಬಿಜೆಪಿ ಪರ ನಟ ಸುದೀಪ್ ಮತದಾರರ ಮನವೊಲಿಸಲಿದ್ದಾರೆ. ಇಂದು ಶಿಕಾರಿಪುರ ಅಭ್ಯರ್ಥಿ ಬಿ ವೈ ವಿಜಯೇಂದ್ರ ಪರ ಮತಯಾಚನೆಗೆ ಕೈ ಜೋಡಿಸಲಿರುವ ಸುದೀಪ್ ಗೆ ನಟಿ, ಮಾಜಿ ವಿಧಾನಪರಿಷತ್ ಸದಸ್ಯೆ ತಾರಾನುರಾಧ ಜೊತೆಯಾಗಲಿದ್ದಾರೆ.
ಗಾಂಧಿನಗರದ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರ ನಟ ಶಿವರಾಜ್ ಕುಮಾರ್ ಪ್ರಚಾರ ನಡೆಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಮೋದಿ ಬೆನ್ನಲ್ಲೇ ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ರೋಡ್…
ಉಳಿದಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಉಡುಪಿಯಲ್ಲಿ, ಶಿಗ್ಗಾಂವ್ನಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲೂ ಮತಬೇಟೆ ನಡೆಸಲಿದ್ದಾರೆ.
ಮೇ 10ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಬಳಿಕ ನಾಳಿನಿಂದ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.