ಲೋಕಸಭಾ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಪ್ರಧಾನಿ ಮೋದಿ-ಗೌತಮ್ ಅದಾನಿ ಸಂಬಂಧದ ಚರ್ಚೆ ಹಸಿಯಾಗಿರುವ ಹೊತ್ತಲ್ಲೇ ಕಾಂಗ್ರೆಸ್ ಹಿಂದುಳಿದ ಸಮುದಾಯಗಳ ಚರ್ಚೆಯನ್ನು ಕೈಗೆತ್ತಿಕೊಂಡಿದೆ.
ಬಿಜೆಪಿಯ ಹಿಂದುತ್ವದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ, ದಲಿತರ ಮತ್ತು ಆದಿವಾಸಿಗಳ ಚರ್ಚೆಯನ್ನು ಮುಂದಿಟ್ಟಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೇ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿವೆ. ಬಿಜೆಪಿ ಸದಾ ಹಿಂದುತ್ವದ ಕುರಿತು ಚರ್ಚಿಸುತ್ತಿತ್ತು. ಆದರೆ, ಇದೀಗ ಕಾಂಗ್ರೆಸ್ ದೇಶದ ಸಂಪತ್ತಿನ ಅಸಮಾನತೆ ಮತ್ತು ಹಿಂದುಳಿದ ಸಮುದಾಯಗಳ ಕುರಿತ ಚರ್ಚೆಯನ್ನು ಕೈಗೆತ್ತಿಕೊಂಡಿದೆ.
ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಜಾತಿಗಣತಿ ಬಿಡುಗಡೆಗೆ ಒತ್ತಾಯಿಸಿದರು. ಆ ಮೂಲಕ ಹಿಂದುಳಿದ ಸಮುದಾಯಗಳ ಸ್ಥಿತಿಗತಿ ಅವಲೋಕಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿದರು.
ರಾಹುಲ್ ಗಾಂಧಿ ಅವರು ಇತ್ತೀಚಿನ ಕೆಲ ವರ್ಷಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ ಕುರಿತು ಮಾತನಾಡುತ್ತಿದ್ದಾರೆ. ಜೊತೆಗೆ ತಮ್ಮ ವಾದದ ರಾಜಕೀಯ ವ್ಯಾಪ್ತಿಯನ್ನು ಜಾತಿ ಮತ್ತು ಹಿಂದುಳಿದ ವರ್ಗಗಳ ತಲೆ ಎಣಿಕೆಗೆ ಜೋಡಿಸುತ್ತಿದ್ದಾರೆ.
“ನಾವು ಸಂಪತ್ತಿನ ಹಂಚಿಕೆ, ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡುವಾಗ, ಪ್ರತಿ ಜಾತಿಯ ಜನಸಂಖ್ಯೆಯನ್ನು ಕಂಡುಹಿಡಿಯುವುದು ಮೊದಲ ಹೆಜ್ಜೆಯಾಗಬೇಕು” ಎಂದು ಹೇಳಿದ್ದಾರೆ.
ಎಸ್ಸಿ ಮತ್ತು ಎಸ್ಟಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಮತ್ತು ಮೀಸಲಾತಿಯ ಮೇಲಿನ ಸುಪ್ರೀಂ ಕೋರ್ಟ್ ಆದೇಶದ ಶೇ 50ರ ಮಿತಿಯನ್ನು ತೆಗೆದುಹಾಕಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಹಿಂದುಳಿದ, ದಲಿತ ಮತ್ತು ಬುಡಕಟ್ಟು ಜನಾಂಗದವರ ಬಗ್ಗೆ ಮಾತನಾಡುತ್ತಿರುವುದು ಮತ್ತು ಭೇಟಿಯಾಗುತ್ತಿರುವುದು ಇದೇ ಮೊದಲೇನಲ್ಲ. ರಾಜಕೀಯ ಜೀವನ ಆರಂಭಿಸಿದಾಗಿನಿಂದ ರಾಹುಲ್ ಗಾಂಧಿ ಈ ಸಮುದಾಯಗಳ ಕುರಿತು ಧ್ವನಿ ಎತ್ತುತ್ತಾ ಬಂದಿದ್ದಾರೆ. 2009ರಲ್ಲಿ ಅವರು ಒಡಿಶಾದ ನಿಯಾಮಗಿರಿ ಬೆಟ್ಟಗಳಲ್ಲಿ ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು.
2011ರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ ನಡೆಸಲಾದ ಸಾಮಾಜಿಕ ಆರ್ಥಿಕ ಜಾತಿ ಜನಗಣತಿಯ (ಎಸ್ಇಸಿಸಿ) ದತ್ತಾಂಶವನ್ನು ಬಿಡುಗಡೆ ಮಾಡಲು ರಾಹುಲ್ ಗಾಂಧಿ ಕೋಲಾರದಲ್ಲಿ ಒತ್ತಾಯಿಸಿದ್ದಾರೆ. “ಹೆಚ್ಚು ಜನಸಂಖ್ಯೆ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಿ” ಮತ್ತು “ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಪತ್ತು ಹಂಚಿ” ಎನ್ನುವ ಘೋಷಣೆಯನ್ನು ರಾಹುಲ್ ಗಾಂಧಿ ಎತ್ತಿ ಹಿಡಿಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಜೋಶಿ ಹಣಿಯಲು ಖೆಡ್ಡಾ ತೋಡಿ ಅಖಾಡಕ್ಕಿಳಿದ ಶೆಟ್ಟರ್
ರಾಹುಲ್ ಹೇಳಿಕೆ ಪ್ರಾದೇಶಿಕ ಪಕ್ಷಗಳಿಗೆ ಶಕ್ತಿ
ರಾಹುಲ್ ಗಾಂಧಿ ಅವರ ಹೇಳಿಕೆ ಹಿಂದಿ ಹೃದಯಭಾಗದ ಪ್ರಾದೇಶಿಕ ಶಕ್ತಿಗಳ ಬೇಡಿಕೆಗೆ ಬಲ ಬಂದಂತಾಗಿದೆ. ಬಿಹಾರದಲ್ಲಿ ಜೆಡಿಯು ಮತ್ತು ಆರ್ಜೆಡಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಒಬಿಸಿಗಳ ಪರ ನಿರಂತರವಾಗಿ ಬ್ಯಾಟ್ ಬೀಸುತ್ತಿರುತ್ತಾರೆ.
ಬಿಹಾರದ ನಿತೀಶ್ ಕುಮಾರ್ ಸರ್ಕಾರ ತನ್ನದೇ ಆದ ಜಾತಿ ಆಧಾರಿತ ಜನಗಣತಿಯನ್ನು ನಡೆಸುವ ಪ್ರಕ್ರಿಯೆಯಲ್ಲಿದೆ. ಹೃದಯ ಭಾಗಗಳ ಹೊರತಾಗಿಯೂ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇತ್ತೀಚೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಹಲವು ವಿರೋಧ ಪಕ್ಷಗಳ ನಾಯಕರನ್ನು ಸಾಮಾನ್ಯ ವೇದಿಕೆಗೆ ಕರೆತಂದಿದ್ದರು.
ಈ ಮೂಲಕ ಕಾಂಗ್ರೆಸ್ ಸದ್ದಿಲ್ಲದೆ ಮುಂದಿನ ಲೋಕಸಭಾ ಚುನಾವಣೆಯ ತಯಾರಿ ನಡೆಸಿದೆ. ಹಿಂದುಳಿದ ವರ್ಗಗಳ ಪರ ಒಲವು ತೋರುವ ಮೂಲಕ ಬಿಜೆಪಿಯ ಹಿಂದುತ್ವದ ವಿರುದ್ಧ ವಿಪಕ್ಷಗಳು ತಂತ್ರ ರಚಿಸುತ್ತಿವೆ.
ಒಬಿಸಿ ಮತಬ್ಯಾಂಕ್ ಪುನಃ ಪಡೆದುಕೊಳ್ಳಲು ಯತ್ನ
ರಾಷ್ಟ್ರ ರಾಜಕಾರಣದ ಆರಂಭದಲ್ಲಿ ಕಾಂಗ್ರೆಸ್ ಒಬಿಸಿ ಮತಬ್ಯಾಂಕ್ ಹೊಂದಿತ್ತು. 1990ರ ದಶಕದಲ್ಲಿ ಮಂಡಲ್ ಆಯೋಗದ ವರದಿಯ ಅನುಷ್ಠಾನದ ನಂತರ ಒಬಿಸಿಗಳ ಮೇಲಿನ ಪಕ್ಷದ ಹಿಡಿತವು ಕುಗ್ಗಲು ಪ್ರಾರಂಭಿಸಿತು.
ಇದರ ಪರಿಣಾಮ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರು ಹಿಂದುಳಿದ ನಾಯಕರಾಗಿ ಮುನ್ನೆಲೆಗೆ ಬಂದರು. ಕಳೆದ ಒಂಬತ್ತು ವರ್ಷಗಳಿಂದ ಬಿಜೆಪಿಯು ಸಹ ಒಬಿಸಿ, ದಲಿತರು ಮತ್ತು ಬುಡಕಟ್ಟು ಜನಾಂಗದವರ ಮತ ಬ್ಯಾಂಕಿಗಾಗಿ ಕಸರತ್ತು ನಡೆಸಿದೆ.
ಜಾತಿಗಣತಿ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ಬಿಜೆಪಿಯ ಹಿಂದುತ್ವದ ವಿರುದ್ಧ ಆದಾಯದ ಅಸಮಾನತೆಯ ಚರ್ಚೆಯನ್ನು ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚಿನ ಜಾತಿ ಗಣತಿಗೆ ಒತ್ತಾಯಿಸಿ ಪತ್ರ ಬರೆದಿದ್ದರು. “ಜಾತಿಗಣತಿ ಬಿಡುಗಡೆ ಮತ್ತು ಅದರ ಅವಲೋಕನ ನಡೆಸದೆ ಹೋದರೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳು ಅಪೂರ್ಣ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಪ್ರಧಾನಿ ಮೋದಿ-ಗೌತಮ್ ಅದಾನಿ ಸಂಬಂಧದ ಚರ್ಚೆ ಹಸಿಯಾಗಿರುವ ಹೊತ್ತಲ್ಲೇ, ಕಾಂಗ್ರೆಸ್ ಇದೀಗ ಹಿಂದುಳಿದ ಸಮುದಾಯಗಳ ಚರ್ಚೆಯನ್ನು ಕೈಗೆತ್ತಿಕೊಂಡಿದ್ದಾರೆ.