- ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿ
- ಒಂದು ಕಡೆ ಲಕ್ಷ, ಕೋಟಿಗೆ ರೇಟು ಪಿಕ್ಸ್, ಇನ್ನೊಂದು ಕಡೆ ಮೀಸಲು ಅಂತಾರೆ!
ಮೀಸಲು ವಿಷಯದಲ್ಲಿ ಜೆಡಿಎಸ್ ನಿಲುವು ಸಂವಿಧಾನದ ಪರ. ಸಂವಿಧಾನದಲ್ಲಿರುವ ಮಾರ್ಗಸೂಚಿಯಂತೆ ಮೀಸಲಾತಿ ಇರಬೇಕು. ಮಕ್ಕಳಾಟಿಕೆ ರೀತಿ ಸಿದ್ಧವಾಗಿರುವ ಮೀಸಲಾತಿಗೆ ನಮ್ಮ ಸಹಮತ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಬೆಂಗಳೂರಿನ ಪಕ್ಷದ ಕೇಂದ್ರ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಮಾಜ ಹಾಳು ಮಾಡುವ, ಜಾತಿಗಳ ಮಧ್ಯೆ ತಂದಿಡುವ ಕೆಲಸ ಆಗಬಾರದು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಹತ್ತು ಜಿಲ್ಲೆಯಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರು ಇದ್ದಾರೆ. ಹೀಗಿದ್ದರೂ ಯಾವುದೇ ಮುಂದಾಲೋಚನೆ ಇಲ್ಲದೆ, ಬೇಜವಾಬ್ದಾರಿಯಿಂದ ಸರ್ಕಾರ ಆದೇಶ ಹೊರಡಿಸಿದ್ದು ಯಾಕೆ? ಕೇವಲ ಮತಕ್ಕಾಗಿ, ಚುನಾವಣೆಗಾಗಿ ಹೀಗೆ ಬಿಜೆಪಿ ಹೀಗೆ ಮಾಡಿದೆ ಎಂದು ಅವರು ಕಿಡಿಕಾರಿದರು.
ಸಮಾಜವನ್ನು ಒಡೆಯಬೇಕು ಎನ್ನುವುದು ದುರುದ್ದೇಶದಿಂದಲೇ ಬಿಜೆಪಿ ಸರಕಾರ ಮೀಸಲು ನಾಟಕ ಆಡಿದೆ. ಮುಸ್ಲಿಮರು ಗಲಾಟೆಗೆ ಮುಂದಾಗಲಿ ಎಂದುಕೊಂಡ ಸರ್ಕಾರ ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇವರ ನಿರೀಕ್ಷೆಯಂತೆ ಒಂದು ವೇಳೆ ಮುಸ್ಲಿಮರು ಬೀದಿಗಿಳಿದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ಅಮಾಯಕ ಜನ ಬಲಿಯಾಗಿದ್ದರೆ ಯಾರು ಹೊಣೆ ಆಗುತ್ತಿದ್ದರು? ರಕ್ತಪಾತ ಮಾಡಲು ಬಿಜೆಪಿಯವರು ಕುತಂತ್ರ ಹೂಡಿದ್ದಾರೆ. ಅವರಿಗೆ ಸಂಘರ್ಷ ಆಗಬೇಕು ಅಷ್ಟೆ ಎಂದ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನ ಬಾಂಧವರಿಗೆ ಕರೆ ನೀಡಿದ ಮಾಜಿ ಸಿಎಂ, ಸಮುದಾಯದವರು ತಾಳ್ಮೆಯಿಂದ ಇರುವಂತೆ ಕೇಳಿಕೊಂಡರು. ಹಾಗೆಯೇ ಸರ್ಕಾರ ಮಾಡಿರುವ ಹುಡುಗಾಟಿಕೆಯ ಮೀಸಲಾತಿಗೆ ಬೆಂಬಲ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ಸರಕಾರವು ಸರಕಾರಿ ನೌಕರಿಯನ್ನು ಯಾವ ರೀತಿ ಕೊಡ್ತಾ ಇದೆ ಎನ್ನುವುದು ಜಗಜ್ಜಾಹೀರು. ಹಣ ಪಡೆದು ನೌಕರಿ ಕೊಡ್ತಾ ಇದ್ದಾರೆ. ಈ ಸರ್ಕಾರ ಹಣ ಕೊಟ್ಟು ಕೆಲಸ ಕೊಡುತ್ತಿದೆಯೇ ಹೊರತು ಮೀಸಲಾತಿ ಮೇಲೆ ಅಲ್ಲ. ಹೀಗಾಗಿ ಮೀಸಲಾತಿ ತಗೊಂಡು ಏನು ಮಾಡೋದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ, ಸರಕಾರಿ ನೇಮಕಾತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತವೆ ಎಂದು ಕುಮಾರಸ್ವಾಮಿ ಹೇಳಿದರು.
ಜೊತೆಗೆ ಹಣ ನಿಗದಿ ಮಾಡಿ ಸರಕಾರಿ ನೌಕರಿ ಕೊಡುವ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸರಿಯಾದ ಚಿಕಿತ್ಸೆ ನೀಡುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ಮೀಸಲಾತಿ ಎಂದು ಬಿಜೆಪಿ ಸರಕಾರ ಜನರನ್ನು ಯಾಮಾರಿಸುತ್ತಿದೆ. ಆದರೆ, ಸರಕಾರಿ ಹುದ್ದೆಗಳನ್ನು ಲಕ್ಷ, ಕೋಟಿ ಲೆಕ್ಕದಲ್ಲಿ ಮಾರಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಇನ್ನು ಕೆಪಿಎಸ್ಸಿ ನೇಮಕಾತಿ ಹಗರಣದ ಬಗ್ಗೆ ಮಾತನಾಡಿದ ಅವರು, ಈ ನೇಮಕಾತಿ ವ್ಯವಸ್ಥೆಯನ್ನು ಸರಿ ಮಾಡುತ್ತೇನೆ. ನೇಮಕಾತಿ ಮಾಡುವ ಸಂಸ್ಥೆಗಳಿಗೆ ತಕ್ಕ ಶಾಸ್ತಿ ಮಾಡಿ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸದ ಮೇಲಿನ ಕಲ್ಲುತೂರಾಟದ ಘಟನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರಕಾರ ಇದನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಶೀಲನೆ ಮಾಡಿಕೊಳ್ಳಬೇಕು ಎಂದರು. ಜೊತೆಗೆ ಘಟನೆಗೆ ಸರಕಾರವೇ ನೇರ ಕಾರಣ ಎಂದರು.
ಈ ಸುದ್ದಿ ಓದಿದ್ದೀರಾ?: ಏ. 20ರವರೆಗೆ ಪಂಚರತ್ನ ರಥಯಾತ್ರೆ : ಕಾಂಗ್ರೆಸ್-ಬಿಜೆಪಿ 70…
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ಡಿಕೆ ವಿರೂಪಾಕ್ಷಪ್ಪನವರ ಬಂಧನ ಯಾವಾಗಲೋ ಆಗಬೇಕಿತ್ತು. ಇದರ ಸತ್ಯಾಂಶ ಏನಿದೆ ಎಂಬುವುದನ್ನು ನೋಡಬೇಕಲ್ಲವೇ? ಎಂದು ಕುಮಾರಸ್ವಾಮಿ ಹೇಳಿದರು.
ವಿರೂಪಾಕ್ಷಪ್ಪ ತಾವು ಅಡಿಕೆ ಬೆಳೆಗಾರ ಎಂದು ಅವರು ಹೇಳಿಕೊಂಡಿದ್ದಾರೆ. ಪ್ರತಿ ವರ್ಷ ನೂರಾರು ಕೋಟಿ ವ್ಯವಹಾರ ಮಾಡುತ್ತೇವೆ ಎಂದಿದ್ದಾರೆ.
ಅಷ್ಟು ವ್ಯವಹಾರ ಮಾಡಿದರೂ ಅಷ್ಟು ದೊಡ್ಡ ಮೊತ್ತದ ನಗದು ಇಟ್ಟುಕೊಳ್ಳುವ ಹಾಗಿಲ್ಲವಲ್ಲ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಈ ಬಗ್ಗೆ ಗಮನ ಕೊಡಬೇಕಲ್ವೇ? ಇನ್ನೇನು ನಾಟಕ ನಡೆಯುತ್ತೆ ನೋಡೋಣ ಎಂದು ಮಾರ್ಮಿಕವಾಗಿ ಕುಮಾರಸ್ವಾಮಿ ನುಡಿದರು.