- ವಿನೂತನ ಸತ್ಯಾಗ್ರಹ ಕ್ಕೆ ಮುಂದಾದ ಪರಿಷತ್ ಸದಸ್ಯ ಎಚ್ ವಿಶ್ವನಾಥ್
- ಮೈಸೂರು ನ್ಯಾಯಾಲಯದ ಎದುರು ಧರಣಿಗೆ ಮುಂದಾದ ಹಳ್ಳಿ ಹಕ್ಕಿ
ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯ ಎಚ್ ವಿಶ್ವನಾಥ್ ವಿನೂತನ ಸತ್ಯಾಗ್ರಹ ಕ್ಕೆ ಮುಂದಾಗಿದ್ದಾರೆ.
ಇಡೀ ರಾಜ್ಯ ರಾಜಕಾರಣ, ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಹಳ್ಳಿಹಕ್ಕಿ ಇಟ್ಟಿರುವ ಈ ನಡೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬಿಜೆಪಿ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್, ಹೊಸ ಸತ್ಯಾಗ್ರಹ ಪರಂಪರೆಗೆ ನಾಂದಿ ಹಾಡಲು ಹೊರಟಿದ್ದಾರೆ.
ರಾಜಕೀಯ ಪಲ್ಲಟದ ಸುಳಿಗೆ ಸಿಲುಕಿ ಸಮ್ಮಿಶ್ರ ಸರ್ಕಾರ ಪತನಕ್ಕೆ ತಾವು ಕಾರಣರಾಗಿ, ಜನವಿರೋಧಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಕೊರಗು ಈಗ ವಿಶ್ವನಾಥ್ ಅವರನ್ನು ಕಾಡತೊಡಗಿದೆ.
ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಾಗಿರುವ ಹಳ್ಳಿ ಹಕ್ಕಿ, ʼಪ್ರಶ್ಚಾತ್ತಾಪ ಸತ್ಯಾಗ್ರಹʼ ನಡೆಸಲು ಸಿದ್ದತೆ ನಡೆಸಿದ್ದಾರೆ.
ಏಪ್ರಿಲ್ 3 ರ ಸೋಮವಾರದಂದು, ಬೆಳಗ್ಗೆ 11ಕ್ಕೆ ಮೈಸೂರು ನ್ಯಾಯಾಲಯ ಮುಂಭಾಗದ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ವಿಶ್ವನಾಥ್ ಈ ಪಶ್ಚಾತ್ತಾಪ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
‘ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನೆಂದು ಗುರುತಿಸಿಕೊಂಡಿದ್ದ ನಾನು, 2018ರ ಚುನಾವಣೆ ಬಳಿಕ ಅಸ್ಥಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಪತನಗೊಳಿಸಲು ಬಿಜೆಪಿ ಜೊತೆ ಕೈ ಜೋಡಿಸಿ, ಬಾಂಬೆ ಪ್ರವಾಸ ನಡೆಸಿದ್ದೆ.ಆ ಬಳಿಕ ನೂತನ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣೀಭೂತನಾಗಿದ್ದೆ. ಆದರೆ ಮುಂದೆ ಇದೇ ಸರ್ಕಾರ ಜನರನ್ನು ಸಂಕಷ್ಟಕ್ಕೆ ದೂಡಿ, ನೋವಿನ ದಿನಗಳನ್ನು ನೋಡುವಂತೆ ಮಾಡಿದೆ. ಹೀಗಾಗಿ ನಾನು ಈ ಸತ್ಯಾಗ್ರಹ ನಡೆಸಿ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಚುನಾವಣೆ 2023 | ಕಾಂಗ್ರೆಸ್ ನಾಯಕ ಮನೋಹರ್ ತಹಶೀಲ್ದಾರ್ ಏ. 7ಕ್ಕೆ ಜೆಡಿಎಸ್ ಸೇರ್ಪಡೆ
ಇತ್ತೀಚೆಗೆ ಬಿಜೆಪಿಯಿಂದ ದೂರ ನಿಂತ ಹಳ್ಳಿ ಹಕ್ಕಿ, ಅದೇ ಬಿಜೆಪಿ ಸರಕಾರದ ತೀರ್ಮಾನಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಬಹಿರಂಗವಾಗಿ ಪಕ್ಷ ಹಾಗೂ ಮುಖಂಡರ ವಿರುದ್ಧ ಹೇಳಿಕೆ ನೀಡುತ್ತಿದ್ದರು.
ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಅವರನ್ನೂ ಒಳಗೊಂಡಂತೆ ಹಲವು ಕಾಂಗ್ರೆಸ್ ನಾಯಕರುಗಳನ್ನು ಭೇಟಿಯಾಗಿದ್ದ ಅಡಗೂರು ವಿಶ್ವನಾಥ್, ಮರಳಿ ಕೈ ಪಕ್ಷಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದರು. ವಿಶ್ವನಾಥ್ ಈಗ ‘ಪಶ್ಚಾತ್ತಾಪ ಸತ್ಯಾಗ್ರಹ’ಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.