ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ ಯೋಜನೆ’ ಜೂನ್ 11ರ ಭಾನುವಾರ ಜಾರಿಯಾಗಲಿದೆ. ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಂದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಆಗಿ ಮಹಿಳೆಯರಿಗೆ ಸಿದ್ದರಾಮಯ್ಯ ಉಚಿತ ಬಸ್ ಟಿಕೆಟ್ ವಿತರಿಸಲಿದ್ದಾರೆ.
ಮೆಜೆಸ್ಟಿಕ್ನಲ್ಲಿ ಯೋಜನೆಗೆ ವಿಭಿನ್ನವಾಗಿ ಚಾಲನೆ ನೀಡಲಿರುವ ಸಿದ್ದರಾಮಯ್ಯ, ಮೆಜೆಸ್ಟಿಕ್ನಿಂದ ವಿಧಾನಸೌಧಕ್ಕೆ ತೆರಳುವ ಮಾರ್ಗ ಸಂಖ್ಯೆ 43ರ ಬಸ್ನಲ್ಲಿ ಕಂಡಕ್ಟರ್ ಆಗಿ, ಟಿಕೆಟ್ ವಿತರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಉಳಿದ ನಾಲ್ಕು ಯೋಜನೆಗಳನ್ನೂ ಇದೇ ರೀತಿ ವಿಭಿನ್ನವಾಗಿ ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗಿದೆ. ಬಿಪಿಎಲ್ ಕುಟುಂಬಗಳಿಗೆ ತಲಾ 10 ಕೆ.ಜಿ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯನ್ನು ಜುಲೈ 1ರಂದು ಮೈಸೂರಿನಲ್ಲಿ ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಇನ್ನು, ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 17ರಂದು ಬೆಳಗಾವಿಯಲ್ಲಿ, ಯುವನಿಧಿ ಯೋಜನೆಯನ್ನು ಮಂಗಳೂರಿನಲ್ಲಿ ಹಾಗೂ ಗೃಹ ಜ್ಯೋತಿ ಯೋಜನೆಯನ್ನು ಕಲಬುರಗಿಯಲ್ಲಿ ಉದ್ಘಾಟಿಸಲು ತೀರ್ಮಾನಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.