ಸಚಿವ ಕೆ.ಸಿ ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ ಬ್ಯಾಗ್ಗಳು ಪತ್ತೆಯಾಗಿದ್ದು, ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡದ ನೋಡಲ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಸಚಿವ ನಾರಾಯಣಗೌಡ ಪ್ರತಿನಿಧಿಸುವ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಬಿಜೆಪಿ ಮುಖಂಡ ಗಂಗಾಧರ ಮತ್ತು ಬ್ಯಾಗ್ ತಯಾರಿಸುವ ಫ್ಯಾಕ್ಟರಿ ಮಾಲೀಕ ಆಂಥೋಣಿ ಪ್ರಸಾದ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರವಷ್ಟೇ ಚುನಾವಣಾ ಆಯೋಗವು ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದು, ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಚುನಾವಣಾಧಿಕಾರಿಗಳು ಚುನಾವಣಾ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೂ ದಿನ ಮುಂಚೆ (ಮಾರ್ಚ್ 27)ರಂದು ಚಾಮರಾಜಪೇಟೆಯಲ್ಲಿರುವ ‘ಯೂನಿಕ್ಸ್ ಪ್ರಾಡಕ್ಟ್’ ಎಂಬ ಬ್ಯಾಗ್ ಫ್ಯಾಕ್ಟರಿ ಮೇಲೆ ಎಂಸಿಸಿ ತಂಡದ ನೋಡಲ್ ಅಧಿಕಾರಿ ಎಂ.ಎಸ್.ಉಮೇಶ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ 4,000 ಬ್ಯಾಗ್ಗಳು ಪತ್ತೆಯಾಗಿದ್ದವು.
ಸಚಿವರ ಫೋಟೋ ಮತ್ತು ಬಿಜೆಪಿ ಚಿಹ್ನೆಯಿದ್ದ ಎಲ್ಲ ಬ್ಯಾಗ್ಗಳನ್ನುಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ನೋಡಲ್ ಅಧಿಕಾರಿ ಉಮೇಶ್ ಅವರು ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
“ಯೂನಿಕ್ಸ್ ಪ್ರಾಡಕ್ಟ್ ಬ್ಯಾಗ್ ಫ್ಯಾಕ್ಟರಿಯಲ್ಲಿ ತೆರಿಗೆ ಪಾವತಿಸದೆ ಬ್ಯಾಗ್ಗಳನ್ನು ಸಂಗ್ರಹಿಸಲಾಗಿದೆ ಎಂಬ ದೂರು ಬಂದಿತ್ತು. ಆ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದ್ದೇವೆ. ಈ ವೇಳೆ ಸಚಿವ ನಾರಾಯಣಗೌಡರ ಭಾವಚಿತ್ರ, ಬಿಜೆಪಿ ಚಿಹ್ನೆ ಇರುವ ಬ್ಯಾಗ್ಗಳು ಪತ್ತೆಯಾಗಿವೆ” ಎಂದು ಉಮೇಶ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕುದುರೆ ವ್ಯಾಪಾರದ ಬಗ್ಗೆ ಮಾತಾಡಿ ಬುದ್ವಂತ್ರೆ : ನೆಟ್ಟಿಗರ ವಿರುದ್ಧ ಉಪೇಂದ್ರ ವ್ಯಂಗ್ಯ
“ಕೆ.ಆರ್.ಪೇಟೆ ಬಿಜೆಪಿ ಅಧ್ಯಕ್ಷನೆಂದು ಹೇಳಿಕೊಂಡು ಗಂಗಾಧರ್ ಎಂಬಾತ ಸುಮಾರು 4 ಸಾವಿರ ಬ್ಯಾಗ್ಗಳಿಗೆ ಆರ್ಡರ್ ಕೊಟ್ಟಿದ್ದರು. ಅವುಗಳನ್ನು ತಯಾರಿಸಿ ಇಡಲಾಗಿತ್ತೆಂದು ವಿಚಾರಣೆ ವೇಳೆ ಫ್ಯಾಕ್ಟರಿ ಮಾಲಕ ಆಂಥೋಣಿ ಪ್ರಸಾದ್ ಹೇಳಿದ್ದಾರೆ” ಎಂದೂ ಅವರು ವಿವರಿಸಿದ್ದಾರೆ.
“ಈ ಬ್ಲಾಗ್ಗಳನ್ನು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಿ, ಆಮಿಷವೊಡ್ಡಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಮತ್ತು ಸಚಿವ ನಾರಾಯಣಗೌಡ ಸಂಗ್ರಹಿಸಿ ಇಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ” ಎಂದು ಉಮೇಶ್ ಆರೋಪಿಸಿದ್ದಾರೆ.