- ಸಚಿವ ಸ್ಥಾನಕ್ಕೆ ನಾನೆಂದೂ ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ
- ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸಿಕೊಂಡು ಹೋಗುತ್ತೇನೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಮತ್ತು ಲಕ್ಷ್ಮಣ ಸವದಿ ಸಚಿವರಾಗಬೇಕು ಎಂಬುದು ಜನರ ಅಭಿಲಾಷೆಯಾಗಿತ್ತು. ಆದರೆ, ಹಲವು ಕಾರಣಗಳಿಂದ ನಮ್ಮಿಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಭಾಗದ ಜನ ಸವದಿ ಹಾಗೂ ನನ್ನನ್ನು ಮಂತ್ರಿಯನ್ನಾಗಿ ನೋಡಲು ಬಯಸಿದ್ದರು. ಆದರೆ ಅದಾಗಲಿಲ್ಲ. ಹೀಗಂದ ಮಾತ್ರಕ್ಕೆ ನಾನು ಸಚಿವಾಕಾಂಕ್ಷಿಯೇನಲ್ಲ. ಎಂದಿಗೂ ನಾನು ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ ಎಂದು ಶೆಟ್ಟರ್ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ʼಸಚಿವ ಸ್ಥಾನವೊಂದೇ ಪಕ್ಷದಲ್ಲಿ ಮುಖ್ಯವಲ್ಲ, ಅದಲ್ಲದೆ ಇನ್ನೂ ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸಿಕೊಂಡು ಹೋಗುತ್ತೇನೆ ಎನ್ನುವ ನಂಬಿಕೆಯಿದೆʼ ಎಂದ ಜಗದೀಶ ಶೆಟ್ಟರ್, ನಾನು ಕಾಂಗ್ರೆಸ್ಗೆ ಯಾವುದೇ ಷರತ್ತಿಲ್ಲದೆ ಬಂದಿದ್ದೇನೆ. ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? : ವಿಶೇಷಚೇತನ ವ್ಯಕ್ತಿಗೆ ಚಿಲ್ಲರೆ ಅಂಗಡಿ ತೆರೆಯಲು ಸಹಾಯಕ್ಕೆ ಬಂದ ಸಚಿವ ಪ್ರಿಯಾಂಕ್ ಖರ್ಗೆ
ಇನ್ನು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಮುಂದಿನ ದಿನಗಳಲ್ಲಿ ಪಕ್ಷ ನನಗೆ ನೀಡುವ ಜವಾಬ್ಧಾರಿ ಅನುಸಾರ ಅದಕ್ಕೆ ಬದ್ಧನಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ ಎಂದರು.