- ಅಂಬೇಡ್ಕರ್ ಜಯಂತಿಯ ದಿನವೇ ಕಾಂಗ್ರೆಸ್ ಸೇರಿದ ಸವದಿ
- ʼಬಿಜೆಪಿ ನಾಯಕರು ಮಾತು ತಪ್ಪಿ ವಚನ ಭ್ರಷ್ಟರಾಗಿದ್ದಾರೆʼ
ವಿಧಾನ ಪರಿಷತ್ ಬಿಜೆಪಿ ಸದಸ್ಯ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶುಕ್ರವಾರ (ಏ.14) ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಅವರು ಅಂಬೇಡ್ಕರ್ ಜಯಂತಿಯ ದಿನವೇ ಸವದಿ ಅವರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡರು.
ಕೆಪಿಸಿಸಿ ಕಚೇರಿಗೆ ಆಗಮಿಸಿದ ಲಕ್ಷ್ಮಣ ಸವದಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಡಿ ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಂ ಬಿ ಪಾಟೀಲ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಡಿ ಕೆ ಶಿವಕುಮಾರ್ ಮಾತನಾಡಿ, “ಬಿಜೆಪಿಯ ಆಧಾರ ಸ್ತಂಭವಾಗಿದ್ದ ಸವದಿ, ಉತ್ತರ ಕರ್ನಾಟಕ ಪ್ರಮುಖ ರಾಜಕಾರಣಿ. ಬಿಜೆಪಿ ನಡೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಪರವಾಗಿ ಸವದಿ ಅವರಿಗೆ ಧನ್ಯವಾದ ತಿಳಿಸುವೆ. ಅವರು ಪಕ್ಷಕ್ಕೆ ಬಂದಿದ್ದು ನಮಗೆ ಮತ್ತಷ್ಟು ಬಲತಂದಿದೆ” ಎಂದು ತಿಳಿಸಿದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಸವದಿ, “ಅತ್ಯಂತ ಶ್ರದ್ಧೆಯಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡುವೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ವಿರುದ್ಧ ಅನೇಕ ಟೀಕೆ ಟಿಪ್ಪಣಿ ಮಾಡಿದ್ದೇನೆ. ಅದನ್ನೆಲ್ಲ ಅವರು ಮರೆತು ಕಾಂಗ್ರೆಸ್ ನಾಯಕರು ನನ್ನ ಬರಮಾಡಿಕೊಂಡಿದ್ದಾರೆ. ಅವರ ವಿಶ್ವಸ ಉಳಿಸಿಕೊಳ್ಳುವೆ” ಎಂದರು.
“ಲಕ್ಷ್ಮಣ ಸವದಿ ಒಬ್ಬ ನಿಷ್ಠಾವಂತ ಕಾರ್ಯಕರ್ತ. ಬಿಜೆಪಿ ನನಗೆ ದ್ರೋಹ ಮಾಡಿದೆ. ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ನಾನೂ ಇದ್ದೆ. ಚುನಾವಣೆ ಸ್ಪರ್ಧೆಗೆ ಅವಕಾಶಕೊಡಿ ಎಂದು ಕೇಳಿದ್ದೆ. ಆದರೆ, ಆಪರೇಷನ್ ಕಮಲ ಮಾಡಿದ್ದೇವೆ. ಅವರಿಗೆ ಸ್ಪರ್ಧಿಸಲು ಅವಕಾಶ ಕೊಡುತ್ತಿದ್ದೇವೆ ಎಂದರು. ಆದರೆ, ಯಡಿಯೂರಪ್ಪ ಅವರು ನನಗೇ ಟಿಕೆಟ್ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಈಗ ಎಲ್ಲರೂ ಮಾತು ತಪ್ಪಿ ಕುಮಾರಸ್ವಾಮಿ ತರ ವಚನಭ್ರಷ್ಟರಾಗಿದ್ದಾರೆ” ಎಂದು ಹರಿಹಾಯ್ದರು.
“ಬಿಜೆಪಿಯೊಳಗಡೆ ಒಂದು ನೀತಿ ಇಲ್ಲ. ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಮನಬಂದಂತೆ ಟಿಕೆಟ್ ನೀಡಲಾಗಿದೆ. ಬಿಜೆಪಿ ನನಗೆ ದ್ರೋಹ ಮಾಡಿದ್ದರಿಂದ ನಾನು ಆ ಪಕ್ಷ ತೊರೆದಿದ್ದೇನೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ನನ್ನ ಅಳಿಲು ಸೇವೆ ಮಾಡುವೆ. ಸವದಿ ಎಲ್ಲಿ ಇರುತ್ತಾರೋ ಅಲ್ಲಿ ನಿಷ್ಠೆ ಮತ್ತು ಶ್ರದ್ಧೆ ಇರುತ್ತದೆ” ಎಂದರು.
ಹಾಸ್ಯ ಚಟಾಕಿ
“ಕರ್ಪೂರ ಡಬ್ಬಿಯೊಳಗೆ ಕರ್ಪೂರ ಆದ ಕೂಡಲೇ ಹೇಗೆ ವಾಸನೆ ಇರುತ್ತದೆಯೋ ಹಾಗೆ ಬಿಜೆಪಿ ವಾಸನೆ ನನ್ನಲ್ಲಿ ಇರುತ್ತದೆ. ಅದನ್ನು ತೊಳದು ಹೊಸ ಕ್ಯಾಸೆಟ್ನೊಂದಿಗೆ ಮುನ್ನಡೆಯುವೆ” ಎಂದು ಹಾಸ್ಯವಾಗಿ ಸವದಿ ಮಾತನಾಡಿದರು.