- ಪಠ್ಯ ಪರಿಷ್ಕರಣೆ ಸಮಿತಿ ವಿಚಾರದ ಮಾಹಿತಿಗೆ ಸ್ಪಷ್ಟೀಕರಣ ನೀಡಿದ ಸಾಹಿತಿ ಬರಗೂರು
- ಹೊಸ ಪಠ್ಯಕ್ರಮಗಳು ಮುಂದಿನ ವರ್ಷ ಮಕ್ಕಳ ಕೈ ಸೇರಲಿದೆ ಎಂದ ಬರಗೂರು ರಾಮಚಂದ್ರಪ್ಪ
ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ಮತ್ತೊಮ್ಮೆ ವಿವಾದದ ಕಿಡಿ ಅಂಟಿಸಿಕೊಂಡಿರುವ ಪಠ್ಯ ಪುಸ್ತಕ ಪರಿಷ್ಕರಣಾ ವಿಚಾರದ ಸಂಬಂಧ ಸಾಹಿತಿ ಬರಗೂರು ರಾಮಚಂದ್ರಪ್ಪ ಸ್ಪಷ್ಟೀಕರಣ ನೀಡಿದ್ದಾರೆ.
ಈ ವಿಚಾರದಲ್ಲಿ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿರುವ ಅವರು, ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಿಲ್ಲ. ಹೊಸ ಸಮಿತಿ ರಚನೆಯಾಗಿಲ್ಲ. ಹಾಗೆಯೇ ನಾನು ಅಧ್ಯಕ್ಷನಾಗಲು ಒಪ್ಪಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಪಠ್ಯ ಪರಿಷ್ಕರಣೆ ವಿಚಾರವಾಗಿ ತಮ್ಮ ಅಭಿಪ್ರಾಯ ತಿಳಿಸಿರುವ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಸಣ್ಣ ಪುಟ್ಟ ಪರಿಷ್ಕರಣೆ ಮಾತ್ರ ಮಾಡುತ್ತಾರೆ. ಆನಂತರ ಹೊಸ ಸಮಿತಿ ಮಾಡಿ ಮುಂದಿನ ವರ್ಷ ಹೊಸ ಪುಸ್ತಕ ತರುತ್ತಾರೆ ಎಂದು ಹೇಳಿದ್ದಾರೆ.
ಸ್ಪಷ್ಟೀಕರಣದ ಹಿನ್ನೆಲೆ
ಪ್ರಸಕ್ತ ಸಾಲಿನ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸಲುವಾಗಿ ರಾಜ್ಯ ಸರ್ಕಾರ ತಾತ್ಕಾಲಿಕ ಸಮಿತಿಯೊಂದನ್ನು ರಚನೆ ಮಾಡಿ, ಅದಕ್ಕೆ 2017ರ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನೇ ಮುಖ್ಯಸ್ಥರನ್ನಾಗಿ ಮಾಡಿ, ದೋಷಪೂರಿತ ಪಠ್ಯಗಳನ್ನು ಪತ್ತೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಇದಕ್ಕೆ ಬಿಜೆಪಿ ನಾಯಕ, ಮಾಜಿ ಸಚಿವ ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ ಹೆಗಡೆವಾರ್, ಚಕ್ರವರ್ತಿ ಸೂಲಿಬೆಲೆ, ಪಠ್ಯಗಳನ್ನು ರದ್ದು ಮಾಡಲು ಹೊರಟಿರುವುದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದರು. ಇವರ ಬಳಿಕ ಹಲವು ನಾಯಕರುಗಳು ಇದೇ ರೀತಿ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದರು.
ಹೀಗೆ ವಿವಾದದ ರೂಪ ಪಡೆದುಕೊಂಡ ವಿಚಾರ ಗಮನಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಸ್ಪಷ್ಟೀಕರಣದ ಹೇಳಿಕೆ ಬಿಡುಗಡೆ ಮಾಡಿದ್ದಾರೆ.