- ಆಕಾಂಕ್ಷಿಗಳ ಪಟ್ಟಿ ಜೊತೆ ದೆಹಲಿಗೆ ತೆರಳಿದ ಎಸ್ಡಿಕೆ ಜೋಡಿ
- ಶನಿವಾರ ಪೂರ್ಣ ಪ್ರಮಾಣದ ಸಂಪುಟ ರಚನೆ ಸಾಧ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಸಂಪುಟ ವಿಸ್ತರಣೆ ಸಂಕಟ ಎದುರಾಗಿದೆ. ಗೆದ್ದು ಬಂದಿರುವ 136 ಮಂದಿ ಶಾಸಕರ ಪೈಕಿ ಯಾರನ್ನು ಸಂಪುಟ ಸದಸ್ಯರನ್ನಾಗಿಸಿಕೊಳ್ಳಬೇಕು ಎನ್ನುವುದೇ ಈಗ ಎಸ್ಡಿಕೆ ಜೋಡಿ ಮುಂದಿರುವ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರುಗಳು ತಮ್ಮ ತಮ್ಮ ಆಪ್ತ ಬಳಗದ ಸದಸ್ಯರನ್ನು ಒಳಗೊಂಡಂತೆ ಸಮುದಾಯ, ಬಿಜೆಪಿ ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್, ಜನಮನ್ನಣೆಯ ನಾಯಕರು ಹೀಗೆ ಹಲವು ಮಾನದಂಡಗಳ ಲೆಕ್ಕಾಚಾರದ ಮೇಲೆ ಒಂದಷ್ಟು ಮಂದಿಯ ಹೆಸರನ್ನು ಪ್ರತ್ಯೇಕಿಸಿ ಅವರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ದರಾಗಿದ್ದಾರೆ. ಈ ಪಟ್ಟಿಯನ್ನು ಹಿಡಿದುಕೊಂಡು ನಾಯಕರಿಬ್ಬರೂ ಶುಕ್ರವಾರ ದೆಹಲಿಗೆ ತೆರಳಿದ್ದಾರೆ.
ಸಂಪುಟ ಸರ್ಕಸ್
ನೂತನ ಸರ್ಕಾರದ ಭಾಗವಾಗಲು ಹಲವರು ತಾ ಮುಂದು ನಾ ಮುಂದು ಎಂದು ಪಾಳಿ ಹಚ್ಚಿ ನಿಂತಿದ್ದಾರೆ. ಮಾಹಿತಿ ಪ್ರಕಾರ ಸಿದ್ದರಾಮಯ್ಯ ಕೋಟಾದಲ್ಲಿ 10 ಮಂದಿ, ಡಿ ಕೆ ಶಿವಕುಮಾರ್ ಕೋಟಾದಲ್ಲಿ 10 ಜನರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇನ್ನುಳಿದ ಸ್ಥಾನಗಳು ಹೈಕಮಾಂಡ್ ಕೋಟಾದಲ್ಲಿ ಹಂಚಿಕೆಯಾಗಲಿವೆ ಎನ್ನಲಾಗಿದೆ.
ಸಂಭಾವ್ಯ ಸಚಿವರ ಪಟ್ಟಿ
ಈ ಬಾರಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಕೈ ಶಾಸಕರನ್ನು ಗೆಲ್ಲಿಸಿಕೊಟ್ಟ ಜಿಲ್ಲೆ ಬೆಳಗಾವಿ. ಬೆಂಗಳೂರು ಹೊರತುಪಡಿಸಿದರೆ ಇದೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ.
ಈ ಬಾರಿ ಕಾಂಗ್ರೆಸ್ ಇಲ್ಲಿನ 18 ಕ್ಷೇತ್ರಗಳ ಪೈಕಿ 11ರಲ್ಲಿ ಗೆದ್ದು ಬೀಗಿದೆ. ಹೀಗಾಗಿ ಈ ಸಲ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಂದ ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸಚಿವಾಕಾಂಕ್ಷಿಗಳಾಗಿದ್ದಾರೆ.
ಇನ್ನು ಬೆಂಗಳೂರ ನಗರ ಜಿಲ್ಲೆಯಲ್ಲಿ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಹ್ಯಾರಿಸ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್, ಎಂ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.
ಈ ಸುದ್ದಿ ಓದಿದ್ದೀರಾ: ಶನಿವಾರ ಸಿದ್ದರಾಮಯ್ಯ ಪ್ರಮಾಣವಚನ; ಸಚಿವ ಸಂಪುಟ ರಚನೆಗೆ ಸಿಎಂ-ಡಿಸಿಎಂ…
ಇನ್ನುಳಿದಂತೆ ಸಮುದಾಯ ಹಾಗೂ ಜಿಲ್ಲೆ ಆಧಾರಿತವಾಗಿ ಜಿ. ಪರಮೇಶ್ವರ್, ಎಚ್ ಸಿ ಮಹದೇವಪ್ಪ, ಆರ್ ಬಿ ತಿಮ್ಮಾಪುರ್, ಎಂಬಿ ಪಾಟೀಲ್, ಕೆಎಚ್ ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೆ ಎನ್ ರಾಜಣ್ಣ, ಕೃಷ್ಣ ಬೈರೇಗೌಡ, ಟಿ ಬಿ ಜಯಚಂದ್ರ, ಅಜಯ್ ಸಿಂಗ್, ಈಶ್ವರ್ ಖಂಡ್ರೆ. ಎಚ್ ಕೆ ಪಾಟೀಲ್, ಭೀಮಣ್ಣ ನಾಯಕ, ಎಸ್ ಎಸ್ ಮಲ್ಲಿಕಾರ್ಜುನ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ , ನಾಗೇಂದ್ರ, ಮಧು ಬಂಗಾರಪ್ಪ, ಮಾಗಡಿ ಬಾಲಕೃಷ್ಣ, ರಾಜೇಗೌಡ, ಚೆಲುವರಾಯಸ್ವಾಮಿ, ಯುಟಿ ಖಾದರ್, ಬಿಕೆ ಹರಿಪ್ರಸಾದ್, ಸಲೀಂ ಅಹಮದ್ ಅವರುಗಳು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರ ಪೈಕಿ ಹಲವರಿಗೆ ಮಂತ್ರಿಯಾಗುವ ಅವಕಾಶ ಲಭ್ಯವಾಗಲಿದೆ.
ಹೀಗೆ ಸಚಿವ ಸ್ಥಾನಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿರುವ ಕೈ ಶಾಸಕರ ನಡುವೆ ಯಾರಿಗೆ ಅದೃಷ್ಟ ಒಲಿದು ಬರುತ್ತದೆ ಎನ್ನುವುದು ಸದ್ಯದ ಕುತೂಹಲ.