- ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಆದೇಶ
- ಆದೇಶ ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ ಕಂದಾಯ ಇಲಾಖೆ
ಸರ್ಕಾರ ನಿಗದಿಪಡಿಸಿರುವ ಸಮಯದಲ್ಲಿ ಕಚೇರಿಗೆ ಆಗಮಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಕಂದಾಯ ಇಲಾಖೆಯು ಅಧಿಕಾರಿಗಳು, ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸೆ.16ರಂದು ಆದೇಶ ಹೊರಡಿಸಿದ್ದು, ನಿಗದಿತ ವೇಳೆಯಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಆದೇಶದಲ್ಲಿ ಅಧಿಕಾರಿಗಳ ಲೋಷದೋಷಗಳ ಬೆಟ್ಟು ಮಾಡಿರುವ ಅವರು, “ಹಲವಾರು ಬಾರಿ ಕಂದಾಯ ಇಲಾಖೆಯ ಅಧೀನ ಶಾಖೆಗಳಿಗೆ ನಾನು ಖುದ್ದಾಗಿ ಪೂರ್ವಾಹ್ನ 10.45 ಗಂಟೆಗೆ ತಪಾಸಣೆಗೆಂದು ಭೇಟಿ ನೀಡಿದ್ದೆ. ಆಗ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಇನ್ನೂ ಹಾಜರಾಗದಿರುವುದು, ಅಲ್ಲದೇ ಸಾಯಂಕಾಲ ಕಚೇರಿ ತುರ್ತು ಕೆಲಸ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಕರೆದಾಗಲೂ ಕಚೇರಿಯಿಂದ ಅತೀ ಬೇಗ ನಿರ್ಗಮಿಸಿರುವುದು ಕಂಡು ಬಂದಿರುತ್ತದೆ. ಇದರಿಂದಾಗಿ ಕಚೇರಿ ಕೆಲಸಕ್ಕೆ, ಅಡಚಣೆಯುಂಟಾಗುತ್ತಿರುತ್ತದೆ” ಎಂದು ಉಲ್ಲೇಖಿಸಿದ್ದಾರೆ.

ಆದೇಶ ಪತ್ರದ ಪ್ರತಿ
ಅಲ್ಲದೇ, “ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಟಪಾಲು, ಕಡತ ಚಲನವಲನ ಚಾರಣೆಗಾಗಿ ಬಂದಾಗ ವಿನಾಕಾರಣ ಅವರೊಂದಿಗೆ ಕಾಲಹರಣ ಮಾಡುತ್ತಿರುವುದು, ಗಂಟೆಗಟ್ಟಲೆ ಟೀ, ಕಾಫಿ, ಉಪಾಹಾರಕ್ಕೆಂದು ಕಚೇರಿ ಬಿಟ್ಟು ಹೋಗುವುದು, ಸಂತೆ ಬೀದಿಗಳಲ್ಲಿ ಓಡಾಡುತ್ತಿರುವುದು ಮುಂತಾದವುಗಳು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಈ ರೀತಿ ಪುನರಾವರ್ತನೆಯಾದಲ್ಲಿ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ರಾಜೇಂದರ್ ಕುಮಾರ್ ಕಟಾರಿಯಾ
ಕಂದಾಯ ಇಲಾಖೆಯ ಎಲ್ಲ ನೌಕಕರು ಪ್ರತಿ ದಿನ ಕಚೇರಿಗೆ ಪೂರ್ವಾಹ 10.30ರೊಳಗಾಗಿ ಕಡ್ಡಾಯವಾಗಿ ಹಾಜರಿರುವುದು ಹಾಗೂ ಸಾಯಂಕಾಲ ಕಚೇರಿಯಿಂದ ತೆರಳುವಾಗ ತಮ್ಮ ಶಾಖೆಯ ಸಂಬಂಧಪಟ್ನ, ಜಂಟಿ,ಉಪ ಕಾರ್ಯದರ್ಶಿಯವರ ಅನುಮತಿ ಪಡೆದು ಕಚೇರಿಯಿಂದ ತೆರಳುವಂತೆಯೂ ಸ್ಪಷ್ಟವಾಗಿ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.ಈ ಸೂಚನೆಗಳನ್ನು ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದೂ ಕೂಡ ಎಚ್ಚರಿಸಿದ್ದಾರೆ.