- ಗೃಹಲಕ್ಷ್ಮಿ ಯೋಜನೆ ಅನುಮಾನಗಳಿಗೆ ಸ್ಪಷ್ಟನೆ ನೀಡಿದ ಕಂದಾಯ ಸಚಿವ
- ಗೃಹ ಲಕ್ಷ್ಮಿ ಯೋಜನೆ 1.30 ಕೋಟಿ ಅರ್ಜಿಗಳು ಬರುವ ನಿರೀಕ್ಷೆ ಮಾಡಲಾಗಿದೆ
ಎಲ್ಲ ರೀತಿಯ ಪಿಂಚಣಿ ಪಡೆಯುವ ಮಹಿಳೆಯರಿಗೂ ಗೃಹಲಕ್ಷ್ಮಿಯೋಜನೆ ಲಾಭ ಸಿಗಲಿದೆ. ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದರು.
ಇಲಾಖೆ ಕಾರ್ಯವೈಖರಿ ಕುರಿತಂತೆ ಮಾತನಾಡಿದ ಅವರು, ಕಂದಾಯ ಇಲಾಖೆ ಅಡಿ ಬರುವ ಪಿಂಚಣಿ ಕಾರ್ಯಕ್ರಮಗಳ ಪರಿಶೀಲನೆ ಸಭೆ ನಡೆಸಲಾಗಿದೆ. 78 ಲಕ್ಷ ನಾನಾ ರೀತಿಯ ಜನರಿಗೆ, ಇಲಾಖೆ ವತಿಯಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕೆ 10,411 ಕೋಟಿ ಈ ವರ್ಷ ಖರ್ಚಾಗುತ್ತಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಬೇರೆ ಪಿಂಚಣಿ ಪಡೆಯುತ್ತಿರುವವರಿಗೂ ಗೃಹಲಕ್ಷ್ಮಿ ಯೋಜನೆ ದೊರಕಲಿದೆ. ಅವರ ಪಿಂಚಣಿ ಮೊಟಕು ಮಾಡಲಾಗುವುದಿಲ್ಲ, ಅವರಿಗೆ ಹೆಚ್ಚುವರಿಯಾಗಿ ಎರಡು ಸಾವಿರ ನೀಡಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರಂಭ; ಪ್ರತಿ ಹುದ್ದೆಗೂ ರೇಟ್ ಫಿಕ್ಸ್ : ಎಚ್ಡಿಕೆ ಆರೋಪ
ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ಅನುಷ್ಠಾನದ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಗೆ ನೀಡಲಾಗಿದೆ. ಇದಕ್ಕೆ ಇಲಾಖೆಗೆ ಸಹಕಾರ ನೀಡಲಾಗುವುದು ಎಂದ ಸಚಿವರು,ಯೋಜನೆಗೆ 1.30 ಕೋಟಿ ಅರ್ಜಿ ಬರಬಹುದೆನ್ನುವ ನಿರೀಕ್ಷೆ ಇದೆ ಎಂದು ಹೇಳಿದರು.
ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಹಂಚಿಕೆ ಅಕ್ರಮ ನಡೆದಿದೆ ಎನ್ನುವ ದೂರು ಬಂದಿದೆ ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಯಾರಿಗೆಲ್ಲ ಸರ್ಕಾರಿ ಭೂಮಿ ಹಂಚಿಕೆ, ಮಂಜೂರಾಗಿದೆ ಎನ್ನುವುದನ್ನು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.