- ದಾವಣಗೆರೆಯಲ್ಲಿ ಬಿಜೆಪಿ ಶಕ್ತಿಪ್ರದರ್ಶನ
- ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ
ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದ ಹೆಸರಿನ ಮೇಲೆ ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಮಾರ್ಚ್ 25ರಂದು ನಡೆಯುವ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು ಅದಕ್ಕಾಗಿ 10ಲಕ್ಷ ಜನರನ್ನು ಕಲೆಹಾಕಲು ಪಕ್ಷ ಮುಂದಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದ ಜಿ ಎಂ ಸಿದ್ದೇಶ್ವರ್, ದಾವಣಗೆರೆ ಜಿಲ್ಲೆಯಿಂದಲೇ 3 ಲಕ್ಷ ಜನರು ಕಾರ್ಯಕ್ರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಸಮಾವೇಶ ನಡೆಯಲಿರುವ ಜಿಎಂಐಟಿ ಕಾಲೇಜಿನ ಪಕ್ಕದ 400 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಲಾಗಿದೆ. ಜನರ ನಡುವೆಯೇ ಮೋದಿ ವೇದಿಕೆ ಪ್ರವೇಶಿಸುವ ಯೋಜನೆ ರೂಪುಗೊಂಡಿದೆ. ಅದಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ- ರಾಜ್ಯದ ಸಚಿವರ ಜೊತೆಗೆ ಇತರ ಪ್ರಮುಖರು ಭಾಗವಹಿಸುತ್ತಾರೆ ಎಂದರು.
ಇನ್ನು ವಿಜಯ ಸಂಕಲ್ಪ ಯಾತ್ರೆ ಬಗ್ಗೆ ಮಾಹಿತಿ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, 4 ವಿಜಯ ಸಂಕಲ್ಪ ಯಾತ್ರೆಗಳು ಯಶಸ್ವಿಯಾಗಿವೆ. 5,600 ಕಿಮೀಗಳನ್ನು ಒಟ್ಟು ಯಾತ್ರೆ ಮೂಲಕ ಕ್ರಮಿಸಲಾಗಿದೆ. ಲಕ್ಷಾಂತರ ಜನರು ಯಾತ್ರೆಯಲ್ಲಿ ಭಾಗಿಯಾಗಿದ್ದು, ಇದರ ಮೂಲಕ ನಾವು 224 ಕ್ಷೇತ್ರಗಳನ್ನೂ ತಲುಪಿದ್ದೇವೆ ಎಂದು ತಿಳಿಸಿದರು.
ಇದೇ 25ರಂದು ಮಧ್ಯಾಹ್ನ 1 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ. ಬರುವವರಿಗೆ ದೊಡ್ಡ ಪ್ರಮಾಣದಲ್ಲಿ ಊಟೋಪಚಾರ ವ್ಯವಸ್ಥೆ ಮಾಡಲಾಗಿದ್ದು, 400 ಕೌಂಟರ್ ಗಳನ್ನು ತೆರೆಯಲಾಗುತ್ತದೆ. ಸಾವಿರ ಜನ ಅಡುಗೆ ಮಾಡುವವರನ್ನು ಇದಕ್ಕೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಉಳಿದಂತೆ ಪಾರ್ಕಿಂಗ್ ಗೆ 44 ಜಾಗಗಳನ್ನು ಗುರುತಿಸಿದ್ದೇವೆ. ಕಾರ್ಯಾಲಯ, ಸ್ವಚ್ಛತೆ ಸೇರಿ ಹಲವು 45 ತಂಡಗಳನ್ನು ನಿಯೋಜಿಸಿದ್ದೇವೆ. 5 ಸಾವಿರ ಪ್ರಬಂಧಕರು ಇದರ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಟೆಂಗಿನ ಕಾಯಿ ವಿವರಿಸಿದರು.