- ಸನ್ನಿಖೇಲ್, ಜರ್ಘುನ್ ಖೇಲ್ ಬುಡಕಟ್ಟು ಸಮುದಾಯಗಳ ನಡುವೆ ಗಣಿ ವಿಚಾರ ಸಂಬಂಧ ಘರ್ಷಣೆ
- ಪಾಕಿಸ್ತಾನ ಕೋಹತ್ ಜಿಲ್ಲೆಯ ಪೇಶಾವರದ ನೈಋತ್ಯದ ದರ್ರಾ ಆಡಮ್ ಖೇಕ್ ಪ್ರದೇಶದಲ್ಲಿ ಘಟನೆ
ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ವಿಚಾರಕ್ಕೆ ಸಂಬಂಧಿಸಿ ಎರಡು ಬುಡಕಟ್ಟು ಸಮುದಾಯಗಳ ನಡುವೆ ಸೋಮವಾರ (ಮೇ 15) ಘರ್ಷಣೆ ಉಂಟಾಗಿ 16 ಮಂದಿ ಮೃತಪಟ್ಟಿದ್ದಾರೆ.
ಕೋಹತ್ ಜಿಲ್ಲೆಯ ಪೇಶಾವರದ ನೈಋತ್ಯಕ್ಕೆ 35 ಕಿಮೀ ದೂರದಲ್ಲಿರುವ ದರ್ರಾ ಆಡಮ್ ಖೇಕ್ ಪ್ರದೇಶದಲ್ಲಿ ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಸಮುದಾಯಗಳ ನಡುವೆ ಕಲ್ಲಿದ್ದಲು ಗಣಿ ಗಡಿ ನಿರ್ಧಾರದ ಸಂಬಂಧ ಗಲಭೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹಗಳು ಮತ್ತು ಗಲಭೆಯಲ್ಲಿ ಗಾಯಗೊಂಡ ಜನರನ್ನು ಪಾಕಿಸ್ತಾನದ ಪೇಶಾವರದ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿದೆ.
ಗಲಭೆಯಲ್ಲಿ ಗಾಯಗೊಂಡವರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಎರಡು ಬುಡಕಟ್ಟಿನ ಸಮುದಾಯಗಳು ನಡೆಸಿದ ಗುಂಡಿನ ದಾಳಿಯಲ್ಲಿ ಉಭಯ ಸಮುದಾಯಗಳ ನಡುವೆ ಸಾವು- ನೋವು ಸಂಭವಿಸಿದೆ ಎಂದು ಪೊಲೀಸರು ಹೇಳಿದರು.
ಗಲಭೆ ಸ್ಥಳಕ್ಕೆ ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿ ತಂಡಗಳು ದೌಡಾಯಿಸಿವೆ. ಎರಡು ಸಮುದಾಯಗಳ ನಡುವಿನ ಗುಂಡಿನ ದಾಳಿಯನ್ನು ನಿಯಂತ್ರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? 2016ರಿಂದ ಅದಾನಿ ಸಮೂಹದ ತನಿಖೆ ಮಾಡಿಲ್ಲ; ಸುಪ್ರೀಂ ಕೋರ್ಟ್ಗೆ ಸೆಬಿ ಮಾಹಿತಿ
ಪಾಕಿಸ್ತಾನ ಡರ್ರಾ ಆಡಮ್ ಖೇಕ್ ಪೊಲೀಸ್ ಠಾಣೆಯಲ್ಲಿ ಗಲಭೆಗೆ ಸಂಬಂಧಿಸಿ ಪ್ರಕರಣವೊಂದನ್ನು ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಸಮುದಾಯಗಳ ನಡುವೆ ಕಲ್ಲಿದ್ದಲು ಗಣಿಯ ಗಡಿ ನಿರ್ಧಾರದ ವಿಚಾರಕ್ಕೆ ಸಂಬಂಧಿಸಿ ಎರಡು ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಎರಡು ಬುಡಕಟ್ಟಿನ ಸಮುದಾಯಗಳ ನಡುವಿನ ಕಲ್ಲಿದ್ದಲು ಗಣಿ ಸಂಬಂಧದ ವಿವಾದವನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ಯಾವುದೂ ಪರಿಹಾರ ರೂಪ ಪಡೆದಿರಲಿಲ್ಲ. ಈ ವಿವಾದ ಈಗ ಗಲಭೆ ರೂಪ ಪಡೆದಿದೆ. ಪ್ರದೇಶದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.