ಪಶ್ಚಿಮ ಮಯನ್ಮಾರ್ ಕರಾವಳಿಯ 12 ಅಡಿ ಆಳದ ಸಮುದ್ರದ ನೀರಿನಲ್ಲಿ ಸಿಲುಕಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
ಬಾಂಗ್ಲಾದೇಶ– ಮಯನ್ಮಾರ್ ಕರಾವಳಿಯಲ್ಲಿ ಮೋಚಾ ಚಂಡಮಾರುತದ ತೀವ್ರತೆ ಹೆಚ್ಚಾಗಿದ್ದು, ಪಶ್ಚಿಮ ಮಯನ್ಮಾರ್ನಲ್ಲಿ ಏಷ್ಯಾದ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ಸಂವಹನ ಕಡಿತಗೊಂಡಿದೆ. ಚಂಡಮಾರುತದಿಂದ 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕನಿಷ್ಠ 6 ಮಂದಿ ಸಾವನಪ್ಪಿದ್ದಾರೆ. ಪಶ್ಚಿಮ ಮಯನ್ಮಾರ್ ಕರಾವಳಿಯ 12 ಅಡಿ ಆಳದ ಸಮುದ್ರದ ನೀರಿನಲ್ಲಿ ಸಿಲುಕಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
20 ಸಾವಿರಕ್ಕೂ ಹೆಚ್ಚು ಜನರು ಎತ್ತರದ ಪ್ರದೇಶಗಳಲ್ಲಿನ ಧಾರ್ಮಿಕ ಸ್ಥಳಗಳು, ಶಾಲೆಗಳು ಹಾಗೂ ಬಲವಾದ ಕಟ್ಟಡಗಳಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ. ಭಾನುವಾರ ಸಂಜೆಯ (ಮೇ 15) ನಂತರ ಚಂಡಮಾರುತವು ಸ್ವಲ್ಪ ದುರ್ಬಲಗೊಂಡಿತ್ತು. ಆದರೆ ಬಹುತೇಕ ಪ್ರದೇಶಗಳಲ್ಲಿ ನೀರಿನ ಹರಿವು ಹಾಗೆಯೇ ಇದೆ. ಚಂಡಮಾರುತಕ್ಕೆ ಸಿಲುಕಿರುವ ಸಾವಿರಾರು ಮಂದಿ, ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಘಗಳ ನೆರವನ್ನು ಬಯಸುತ್ತಿದ್ದಾರೆ.
ಗಂಟೆಗೆ 209 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಮಯನ್ಮಾರ್ನ ಸಿಟ್ವೆ ಟೌನ್ಶಿಪ್ ಬಳಿ ಭೂಕುಸಿತ ಉಂಟಾಗಿದೆ. ಗಾಳಿಯ ವೇಗಕ್ಕೆ ಹಲವೆಡೆ ಮೊಬೈಲ್ ಟವರ್ಗಳು ಪುಡಿಪುಡಿಯಾಗಿದ್ದು, ಸ್ಥಳೀಯ ಪ್ರದೇಶಗಳು ಹಾಗೂ ಇತರ ದೇಶಗಳೊಂದಿನ ಸಂವಹನ ಕಡಿತಗೊಂಡಿದೆ. ಹಲವು ರಸ್ತೆಗಳಲ್ಲಿ ಹತ್ತಕ್ಕೂ ಹೆಚ್ಚು ಅಡಿ ನೀರು ತುಂಬಿಕೊಂಡಿದೆ. ಚಂಡಮಾರುತದ ರಭಸಕ್ಕೆ ನೂರಾರು ಮನೆಗಳು ಹಾಗೂ ಕಟ್ಟಡಗಳ ಛಾವಣಿಗಳು ಹಾರಿಹೋಗಿವೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಚುನಾವಣೆ | ಸದುಪಯೋಗವಾಗಲಿ ಕಾಂಗ್ರೆಸ್ ‘ಗ್ಯಾರಂಟಿ’
ಮೋಚಾ ಭೀತಿಯಿಂದಾಗಿ ಬಾಂಗ್ಲಾದೇಶದ ಕಾಕ್ಸ್ ಬಜಾರ್ ಪ್ರದೇಶದ ಸಾವಿರಾರು ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಸೇಂಟ್ ಮಾರ್ಟಿನ್ ದ್ವೀಪದಲ್ಲಿ 300 ಮನೆಗಳು ಹಾನಿಗೊಂಡು ಸುಮಾರು ಹನ್ನೆರಡು ಮಂದಿ ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆ ಹಾಗೂ ಕರಾವಳಿ ಭಾಗಗಳಾದ ಪುರ್ಬಾ ಮೇದಿನಿಪುರ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿಘಾ ಹಾಗೂ ಮಂದಾರಮಣಿ ಕರಾವಳಿ ಪ್ರದೇಶದಲ್ಲಿ ಎನ್ಡಿಆರ್ಎಫ್ ಅಲ್ಲದೆ, ಯಾವುದೇ ಪರಿಸ್ಥಿತಿಯಲ್ಲಿ ಜನರನ್ನು ಸ್ಥಳಾಂತರಿಸುವ ಅಗತ್ಯ ಬಂದರೆ ಅದಕ್ಕೆ ಪೂರಕವಾಗಿರುವ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಶ್ರಯ ಶಿಬಿರಗಳನ್ನೂ ನಿರ್ಮಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದ್ದು, ಯಾವುದೇ ಸಂದರ್ಭದಲ್ಲೂ ಚಂಡಮಾರುತ ಬಾಂಗ್ಲಾ- ಮಾಯನ್ಮಾರ್ ಗಡಿದಾಟುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.