- ನ್ಯೂಯಾರ್ಕ್ನ ಜಾವಿಟ್ಸ್ ಸೆಂಟರ್ನಲ್ಲಿ ರಾಹುಲ್ ಗಾಂಧಿ ಮಾತು
- ಒಡಿಶಾ ರೈಲು ಅಪಘಾತದಲ್ಲಿ ಮೃತರಿಗೆ ಜಾವಿಟ್ಸ್ ಸೆಂಟರ್ನಲ್ಲಿ ಸಂತಾಪ
ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಭಾನುವಾರ (ಜೂನ್ 4) ವಾಗ್ದಾಳಿ ನಡೆಸಿದ್ದಾರೆ.
ಭವಿಷ್ಯದ ಬಗ್ಗೆ ಮಾತನಾಡದೆ ತಮ್ಮ ವೈಫಲ್ಯಗಳಿಗೆ ಇತರರನ್ನು ದೂಷಿಸುತ್ತ ಆಡಳಿತ ಪಕ್ಷ ಬಿಜೆಪಿ ಕಾಲಕಳೆಯುತ್ತಿದೆ ಎಂದು ರಾಹುಲ್ ದೂರಿದ್ದಾರೆ.
“ಪ್ರಧಾನಿ ಮೋದಿ ಭಾರತ ಎಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಚಾಲನೆ ಮಾಡುತ್ತಿದ್ದಾರೆ. ಅಪಘಾತವಾಗಿ ಕಾರು ನಿಂತಾಗ ಅದು ಏಕೆ ಮುಂದೆ ಸಾಗುತ್ತಿಲ್ಲ ಎಂದು ಅವರು ಯೋಚಿಸುತ್ತಾರೆ” ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ಆಡಳಿತವನ್ನು ಲೇವಡಿ ಮಾಡಿದರು.
ರಾಹುಲ್ ಗಾಂಧಿ ಅವರು ನ್ಯೂಯಾರ್ಕ್ನ ಜಾವಿಟ್ಸ್ ಸೆಂಟರ್ನಲ್ಲಿ ಭಾರತೀಯ-ಅಮೆರಿಕನರನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರಿಗಾಗಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.
ಒಡಿಶಾದ ಬಾಲಾಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ತ್ರಿವಳಿ ರೈಲು ಅವಘಡದಲ್ಲಿ ಸುಮಾರು 270 ಮಂದಿ ಮೃತಪಟ್ಟಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ರಾಹುಲ್ ಗಾಂಧಿ ಒಡಿಶಾ ರೈಲು ಅಪಘಾತದ ಬಗ್ಗೆ ಮಾತನಾಡಿ, “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತವೊಂದು ನಡೆದಿತ್ತು. ಆಗ ರೈಲ್ವೆ ಸಚಿವರು `ಈಗ ನಡೆದ ಅಪಘಾತಕ್ಕೆ ಬ್ರಿಟಿಷರು ಕಾರಣ ಎಂದು ಹೇಳಿರಲಿಲ್ಲ. ಇದರ ಸಂಪೂರ್ಣ ಹೊಣೆ ನನ್ನದು ಎಂದು ರಾಜೀನಾಮೆ ನೀಡುತ್ತೇನೆ’ ಎಂದಿದ್ದರು. ಆದರೆ ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆದರೂ ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ” ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಜ್ಞಾನವಾಪಿ ಮಸೀದಿ ವಿವಾದ: ಪ್ರಕರಣಗಳಿಂದ ಹಿಂದೆ ಸರಿದ ಹಿಂದೂ ಕುಟಂಬ
“ಪ್ರಧಾನಿಯಿಂದ ಹಿಡಿದು ಬಿಜೆಪಿಯ ಯಾರೊಬ್ಬರು ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಹಿಂದೆ ಆಗಿ ಹೋಗಿರುವುದರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸಲು ಬಿಜೆಪಿ ಮತ್ತು ಆರ್ಎಸ್ಎಸ್ ಅಸಮರ್ಥವಾಗಿವೆ” ಎಂದು ಟೀಕಿಸಿದರು.
“ಭಾರತದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ, ಆರ್ಎಸ್ಎಸ್ ಪ್ರತಿಪಾದಿಸುವ ಸಿದ್ದಾಂತಗಳ ನಡುವೆ ಹೋರಾಟ ನಡೆಯುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದರು.