ನಾಥನ್ ಎಲ್ಲಿಸ್ ಮಾರಕ ಬೌಲಿಂಗ್ ಪರಿಣಾಮ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ, ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ರನ್ಗಳ ರೋಚಕ ಜಯ ಗಳಿಸಿತು.
ಕೊನೆಯ ಓವರ್ಗಳಲ್ಲಿ ಶಿಮ್ರಾನ್ ಹೆಟ್ಮೆಯರ್,ಧ್ರುವ್ ಜುರೆಲ್ ಸಿಕ್ಸರ್ ಬೌಂಡರಿ ಮೂಲಕ ಗೆಲುವಿನ ಭರವಸೆ ಚಿಗುರಿಸಿದರೂ ಗುರಿ ನೆರವೇರಲಿಲ್ಲ.
ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 198 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೆ ಶಕ್ತವಾಯಿತು.
ಕೊನೆಯ ಗಳಿಗೆಯಲ್ಲಿ ಸ್ಪೋಟಕ ಆಟವಾಡಿದ ಶಿಮ್ರಾನ್ ಹೆಟ್ಮೆಯರ್ (36),ಧ್ರುವ್ ಜುರೆಲ್ (32) ಸೋಲಿನಲ್ಲೂ ಪ್ರೇಕ್ಷಕರ ಮನದಲ್ಲಿ ಉಳಿದರು.
ಪಂಜಾಬ್ ತಂಡದ ನಾಥನ್ ಎಲ್ಲಿಸ್ 30/4 ಹಾಗೂ ಅರ್ಶ್ದೀಪ್ ಸಿಂಗ್ 47/2 ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ರಭಾಸಿಮ್ರಾನ್, ಶಿಖರ್ ಧವನ್ ಮೊದಲ ಎಸೆತದಿಂದಲೇ ಬ್ಯಾಟ್ ಬೀಸಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಗಳನ್ನು ಬೆವರಿಳಿಸತೊಡಗಿದರು.
ಸಿಕ್ಸ್ ಹಾಗೂ ಬೌಂಡರಿ ಬಾರಿಸುತ್ತಿದ್ದ ಪ್ರಭಾಸಿಮ್ರಾನ್ ಸಿಂಗ್ ಹತ್ತನೇ ಓವರ್ನಲ್ಲಿ ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ವಿಕೇಟ್ ಕೀಪರ್ ಜಾಸ್ ಬಟ್ಲರ್ಗೆ ಕ್ಯಾಚಿತ್ತು ನಿರ್ಗಮಿಸಿದರು. 34 ಚಂಡುಗಳಲ್ಲಿ 60 ರನ್ ಬಾರಿಸಿದ ಪ್ರಭಾಸಿಮ್ರಾನ್ ಬ್ಯಾಟಿಂಗ್ನಲ್ಲಿ 7 ಅಮೋಘ ಬೌಂಟರಿ ಹಾಗೂ 3 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ಭಾನುಕಾ ರಾಜಪಕ್ಸೆ ಗಾಯಗೊಂಡು ನಿವೃತ್ತರಾದರೆ, ನಾಲ್ಕನೇ ಕ್ರಮಾಂಕದ ಜಿತೀಶ್ ಶರ್ಮಾ, ಧವನ್ಗೆ ಜೊತೆಯಾಗಿ 16 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ನೊಂದಿಗೆ 27 ರನ್ ಬಾರಿಸಿದರು. ಸಿಕಂದರ್ ರಝಾ ಕೂಡ ಹೆಚ್ಚು ಹೊತ್ತು ನಿಲ್ಲದೆ ಒಂದು ರನ್ ಗಳಿಸಿ ಅಶ್ವಿನ್ಗೆ ಬೌಲ್ಡ್ ಆದರು.
ಕೊನೆಯವರೆಗೂ ಆಟವಾಡಿದ ನಾಯಕ ಶಿಖರ್ ಧವನ್ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ನೊಂದಿಗೆ 86 ರನ್ ಪೇರಿಸಿ ಪಂಜಾಬ್ 20 ಓವರ್ಗಳಲ್ಲಿ 197/4 ಮೊತ್ತ ದಾಖಲಿಸಲು ಕಾರಣರಾದರು.
ರಾಜಸ್ಥಾನ್ ಪರ ಹೋಲ್ಡರ್ 2, ಚಹಾಲ್ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು.