- ಪೆನಾಲ್ಟಿ ಶೂಟೌಟ್ನಲ್ಲಿ ಮಣಿದ ಸುನಿಲ್ ಛೆಟ್ರಿ ಪಡೆ
- 2ನೇ ಬಾರಿ ಚಾಂಪಿಯನ್ ಆಗುವ ಬಿಎಫ್ಸಿ ಕನಸು ಭಗ್ನ
ಬೆಂಗಳೂರು ಎಫ್ಸಿ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಮಣಿಸಿದ ಎಟಿಕೆ ಮೋಹನ್ ಬಗಾನ್ ಕ್ಲಬ್, 9ನೇ ಆವೃತ್ತಿಯ ಐಎಸ್ಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಗೋವಾದ ಫಟೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಎಟಿಕೆ ಪರ ಡಿಮಿಟ್ರಿ ಪೆಟ್ರಾಟೋಸ್ 14 ಮತ್ತು 85ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ದಾಖಲಿಸಿದರೆ, ಬೆಂಗಳೂರು ಪರ ನಾಯಕ ಸುನಿಲ್ ಛೆಟ್ರಿ 45+5ನೇ ನಿಮಿಷ (ಪೆನಾಲ್ಟಿ) ಮತ್ತು 78ನೇ ನಿಮಿಷದಲ್ಲಿ ರಾಯ್ ಕೃಷ್ಣ ಗೋಲು ದಾಖಲಿಸಿದ್ದರು.
ಪೂರ್ಣಾವಧಿಯ ವೇಳೆಗೆ ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯ ಹೆಚ್ಚುವರಿ ಅವಧಿಗೆ ಮುಂದೂಡಲ್ಪಟ್ಟಿತು. ಹೆಚ್ಚುವರಿ ಅವಧಿಯ 30 (15+15) ನಿಮಿಷಗಳ ಆಟದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟ್ಟ್ ಮೊರೆ ಹೋಗಲಾಯಿತು.
ಪೆನಾಲ್ಟಿ ಶೂಟೌಟ್ನಲ್ಲಿ ದೊರೆತ 5 ಅವಕಾಶಗಳಲ್ಲಿ ನಾಲ್ಕನ್ನು ಮೋಹನ್ ಬಗಾನ್ ಆಟಗಾರರು ಗೋಲಾಗಿ ಪರಿವರ್ತಿಸಿದ್ದರು. ಆದರೆ ಕೇವಲ ಮೂರು ಬಾರಿಯಷ್ಟೇ ಗುರಿ ತಲುಪಲು ಬಿಎಫ್ಸಿಗೆ ಸಾಧ್ಯವಾಯಿತು. ಆ ಮೂಲಕ ಕೋಲ್ಕತ್ತಾದ ಎಟಿಕೆ ಮೋಹನ್ ಬಗಾನ್ ತಂಡದ ಚೊಚ್ಚಲ ಐಎಸ್ಎಲ್ ಕಿರೀಟದ ಕನಸು ಗೋವಾದ ಮಣ್ಣಿನಲ್ಲಿ ನನಸಾಯಿತು.
ಮಾರ್ಚ್ 12ರಂದು ಕಂಠೀರವ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಚರಣದ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಮಣಿಸಿ ಬಿಎಫ್ಸಿ ನಾಲ್ಕು ವರ್ಷಗಳ ಬಳಿಕ ಒಟ್ಟಾರೆ 3ನೇ ಬಾರಿಗೆ ಐಎಸ್ಎಲ್ ಫೈನಲ್ ಪ್ರವೇಶಿಸಿತ್ತು.
2017-18ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಬಿಎಫ್ಸಿ, ಚೆನ್ನೈ ಎಫ್ಸಿ ತಂಡಕ್ಕೆ 2-3 ಗೋಲುಗಳ ಅಂತರದಲ್ಲಿ ಶರಣಾಗಿತ್ತು. ಮುಂದಿನ ಆವೃತ್ತಿಯಲ್ಲಿ (2018-19) ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿ, ಗೋವಾ ತಂಡವನ್ನು ಮಣಿಸಿ ಬೆಂಗಳೂರು ಚೊಚ್ಚಲ ಚಾಂಪಿಯನ್ ಪಟ್ಟವನ್ನೇರಿತ್ತು. ಆದರೆ ಮೂರನೇ ಬಾರಿ ಫೈನಲ್ ಪ್ರವೇಶಿಸಿ 2ನೇ ಬಾರಿ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದ್ದ ಬಿಎಫ್ಸಿಗೆ ನಿರಾಸೆಯಾಗಿದೆ.