ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದೆ.
ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ʻಫೈನಲ್ ಪೈಟ್ʼನಲ್ಲಿ ಭಾರತ, ಅಚ್ಚರಿ ಎಂಬಂತೆ ನಾಲ್ವರು ವೇಗಿಗಳಿಗೆ ಮಣೆ ಹಾಕಿದೆ. ಹೀಗಾಗಿ ವಿಶ್ವದ ನಂ.1 ಟೆಸ್ಟ್ ಬೌಲರ್, ನಂ.2 ಟೆಸ್ಟ್ ಆಲ್ರೌಂಡರ್ ಖ್ಯಾತಿಯ ಅನುಭವಿ ರವಿಚಂದ್ರನ್ ಅಶ್ವಿನ್, ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ. ಸ್ಪಿನ್ ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಅಶ್ವಿನ್ ಬದಲು ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟಾಸ್ ಬಳಿಕ ಮಾತಣಾಡಿದ ನಾಯಕ ರೋಹಿತ್ ಶರ್ಮಾ, ʻಮೋಡ ಕವಿದ ವಾತಾವರಣವಿದೆ. ಹೀಗಾಗಿ ಪಿಚ್ ತುಂಬಾ ಬದಲಾಗುತ್ತದೆ ಎಂದು ಅನಿಸುತ್ತಿಲ್ಲ. ನಾಲ್ಕು ವೇಗದ ಬೌಲರ್ ಮತ್ತು ಓರ್ವ ಸ್ಪಿನ್ನರ್ ಜೊತೆ ನಾವು ಆಡಲಿದ್ದೇವೆ. ಜಡೇಜಾ ಆಡಲಿದ್ದು, ಅಶ್ವಿನ್ ಹೊರಗುಳಿಯಲಿದ್ದಾರೆ. ಅನುಭವಿ ಅಶ್ವಿನ್ ಅವರನ್ನು ತಂಡದಿಂದ ಕೈ ಬಿಡುವುದು ಕಠಿಣ ನಿರ್ಧಾರವಾಗಿದೆ. ಹಲವು ವರ್ಷಗಳಿಂದ ಆಶ್ವಿನ್ ತಂಡದ ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಮಧ್ಯಮ ಕ್ರಮಾಖದಲ್ಲಿ ರಹಾನೆ ಆಡಲಿದ್ಧಾರೆ. 80 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ ಅನುಭವ, ಈ ಪಂದ್ಯದಲಿ ತಂಡಕ್ಕೆ ನೆರವಾಗುವ ನಿರೀಕ್ಷೆ ಇದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
18 ತಿಂಗಳುಗಳ ಬಳಿಕ ಮರಳಿದ ರಹಾನೆ
ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ, ಸುಮಾರು 18 ತಿಂಗಳ ಬಳಿಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಕಂಡ ಐಪಿಎಲ್ನಲ್ಲಿ ಚೆನ್ನೈ ಪರ ಆಡಿದ್ದ ರಹಾನೆ, ವೇಗವಾಗಿ ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು.
ಇನ್ನು ಮುಂಬೈ ಓಪನರ್ ಇಶಾನ್ ಕಿಶನ್ ಬದಲು ಮಹತ್ವದ ಪಂದ್ಯದಲ್ಲಿ ಕೆಎಸ್ ಭರತ್ಗೆ ವಿಕೆಟ್ ಕೀಪಿಂಗ್ ಅವಕಾಶ ದೊರೆತಿದೆ. ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಉಮೇಶ್ ಯಾದವ್ ಜೊತೆಗೆ ಶಾರ್ದೂಲ್ ಠಾಕೂರ್ ನಾಲ್ಕನೇ ವೇಗದ ಬೌಲರ್ ಸ್ಥಾನವನ್ನು ತುಂಬಿದ್ದಾರೆ.
ಆಡುವ ಹನ್ನೊಂದರ ಬಳಗ
ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಮುಹಮ್ಮದ್ ಸಿರಾಜ್, ಮುಹಮ್ಮದ್ ಶಮಿ.
ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್