ಐಪಿಎಲ್ 16ನೇ ಆವೃತ್ತಿಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಪಂದ್ಯ ಸೋಮವಾರ [ ಏಪ್ರಿಲ್ 17] ನಡೆಯಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಕದನದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು- ಆರ್ಸಿಬಿ ಮತ್ತು ಎಂಎಸ್ ಧೋನಿ ಸಾರಥ್ಯದ ಬಲಿಷ್ಠ ಚೆನೈ ಸೂಪರ್ ಕಿಂಗ್ಸ್ – ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿವೆ.
ಘಟಾನುಘಟಿ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಚೆನ್ನೈ ತಂಡ ಮೇಲ್ನೋಟಕ್ಕೆ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸುತ್ತಿದೆ.
ಆದರೆ, ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಡುಪ್ಲೆಸಿಸ್ ತಂಡ ಸಿಎಸ್ಕೆ ವಿರುದ್ಧವೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಮಾಜಿ ನಾಯಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ 3 ಅರ್ಧ ಶತಕ ಗಳಿಸಿ ಉತ್ತಮ ಫಾರ್ಮ್ನಲ್ಲಿರುವುದು ಆರ್ಸಿಬಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ನಿರ್ಣಾಯಕ ರನ್ಗಳಿಸುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ.
ಆದರೆ ಕಳೆದ ಋತುವಿನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚು ಹರಿಸಿದ್ದ ವಿಕೆಟ್ ಕೀಪರ್ ಹಾಗೂ ಫಿನಿಶರ್ ದಿನೇಶ್ ಕಾರ್ತಿಕ್, ಈ ಆವೃತ್ತಿಯಲ್ಲಿ ಇದುವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ಒಟ್ಟು 10 ರನ್ [0, 9, 1, 0] ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಿನ್ನೆಲೆಯಲ್ಲಿ
ಈ ಹಿನ್ನೆಲೆಯಲ್ಲಿ ಇಂದಿನ ಮಹತ್ವದ ಪಂದ್ಯದಲ್ಲಿ ಫಾರ್ಮ್ ಕಂಡುಕೊಳ್ಳುವುದು ಕಾರ್ತಿಕ್ ಪಾಲಿಗೆ ಅನಿವಾರ್ಯವಾಗಿದೆ.
ಉಭಯ ತಂಡಗಳು ಪ್ರಸಕ್ತ ಟೂರ್ನಿಯಲ್ಲಿ ತಲಾ ನಾಲ್ಕು ಪಂದ್ಯಗಳನ್ನಾಡಿವೆ. ಇದರಲ್ಲಿ ತಲಾ 2 ಸೋಲು ಮತ್ತು ಗೆಲುವು ಕಂಡಿವೆ. ಸೋಮವಾರ ತವರಿನ ಅಂಗಣದಲ್ಲಿ ಆರ್ಸಿಬಿ ಸತತ 2ನೇ ಗೆಲುವನ್ನು ಎದುರು ನೋಡುತ್ತಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಚೆನೈ ನಾಯಕ ಎಂಎಸ್ ಧೋನಿ ಅಂತಿಮ ಎಸೆತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ್ದರು. ಆದಾಗ್ಯೂ ತಂಡದ 2ನೇ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
ಆದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸೋಮವಾರ ಧೋನಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಡೆವೊನ್ ಕಾನ್ವೆ , ಋತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಫಾರ್ಮ್ನಲ್ಲಿದ್ದಾರೆ.