- ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿ
- ಕೆಕೆಆರ್ಗೆ ಕಾಡಿದ ಪ್ರಮುಖ ಆಟಗಾರರ ಅನುಪಸ್ಥಿತಿ
ಐಪಿಎಲ್ ಟೂರ್ನಿಯ 16ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ, ಕೆಕೆಆರ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಮಣಿಸಿದ ಹುಮ್ಮಸ್ಸಿನಲ್ಲಿರುವ ಫಾಫ್ ಡು ಪ್ಲೆಸಿಸ್ ಸಾರಥ್ಯದ ಆರ್ಸಿಬಿ, ಕೆಕೆಆರ್ ಜೊತೆಗಿನ ಎರಡನೇ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.
ಮತ್ತೊಂದೆಡೆ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ್ದ ನಿತೀಶ್ ರಾಣಾ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್, ತವರು ಅಭಿಮಾನಿಗಳ ಬೆಂಬಲದೊಂದಿಗೆ ಆರ್ಸಿಬಿ ವಿರುದ್ಧ ಗೆದ್ದು ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ನಲ್ಲಿ ಈವರೆಗೂ ಒಟ್ಟು 30 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಕೆಕೆಆರ್ ತಂಡವು 16 ಬಾರಿ ಮತ್ತು ಆರ್ಸಿಬಿ 14 ಗೆಲುವು ಕಂಡಿದೆ.
ಶಕಿಬ್ ಬದಲಿಗೆ ಜೇಸನ್ ರಾಯ್
ಗಾಯದ ಸಮಸ್ಯೆಯಿಂದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ. ಮತ್ತೋರ್ವ ಪ್ರಮುಖ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅವರು ಈ ಟೂರ್ನಿಗೆ ಅಲಭ್ಯರಾಗಿದ್ದು, ಶಕಿಬ್ ಬದಲಿ ಆಟಗಾರನಾಗಿ ಇಂಗ್ಲೆಂಡ್ನ ಸ್ಫೋಟಕ ಆರಂಭಿಕ ಆಟಗಾರ ಜೇಸನ್ ರಾಯ್ ಜತೆ ಕೆಕೆಆರ್ ಒಪ್ಪಂದ ಮಾಡಿಕೊಂಡಿದೆ. ಜೇಸನ್ ರಾಯ್ ಅವರನ್ನು ₹2.8 ಕೋಟಿಗೆ ಖರೀದಿಸಿದೆ.
2017ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಆಡಿದ್ದ ರಾಯ್, ಇದುವರೆಗೆ 13 ಪಂದ್ಯಗಳನ್ನಾಡಿದ್ದಾರೆ. 29.90 ಸರಾಸರಿಯಲ್ಲಿ ಒಟ್ಟು 329 ರನ್ ಗಳಿಸಿದ್ದಾರೆ. ಕಳೆದ ಬಾರಿ ಜೇಸನ್ರನ್ನು ಗುಜರಾತ್ ಟೈಟಾನ್ಸ್ ₹2 ಕೋಟಿಗೆ ಖರೀದಿಸಿತ್ತು. ಆದರೆ ಟೂರ್ನಿಯಿಂದ ರಾಯ್ ಹಿಂದೆ ಸರಿದಿದ್ದರು.
ಪಂದ್ಯವಾಡುವ ಹನ್ನೊಂದರ ಬಳಗ:
ಕೋಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ಮನದೀಪ್ ಸಿಂಗ್, ರಹ್ಮಾಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಆಂಡ್ರೆ ರಸೆಲ್, ಟಿಮ್ ಸೌಥಿ, ಸುನಿಲ್ ನರೈನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಅನುಕುಲ್ ರಾಯ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮುಹಮ್ಮದ್ ಸಿರಾಜ್.