ಐಪಿಎಲ್ನ 16ನೇ ಆವೃತ್ತಿಯಲ್ಲಿ ಭಾನುವಾರ ಎರಡು ಹೈವೋಲ್ಟೇಜ್ ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30 ಕ್ಕೆ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ಸಂಜೆ 7:30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಬೆಂಗಳೂರಿನಲ್ಲಿ ಐಪಿಎಲ್ ಕ್ರೇಝ್
ಮೂರು ವರ್ಷಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದೆ. ಆರ್ಸಿಬಿ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
32 ಸಾವಿರ ಆಸನ ವ್ಯವಸ್ಥೆಯುಳ್ಳ ಮೈದಾನದ ಎಲ್ಲಾ ಟಿಕೆಟ್ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ಚಿನ್ನಸ್ವಾಮಿ ಪಿಚ್ ಪ್ರತಿ ಬಾರಿಯೂ ಬ್ಯಾಟರ್ಗಳಿಗೆ ಅನುಕೂಲಕರವಾಗಿರುವುದರಿಂದ ಭಾನುವಾರ ರನ್ ಹೊಳೆಯೇ ಹರಿಯುವ ನಿರೀಕ್ಷೆ ಇದೆ.
ಆರ್ಸಿಬಿಯಲ್ಲಿ ಪ್ರಮುಖ ಗೈರು
ಐಪಿಎಲ್ನಲ್ಲಿ ಈ ಬಾರಿ ಆರಂಭದಲ್ಲೇ ಆರ್ಸಿಬಿಗೆ ಆಘಾತ ಎದುರಾಗಿದೆ. ಪ್ರಮುಖ ಆಟಗಾರರಾದ ಜೋಶ್ ಹ್ಯಾಝಲ್ವುಡ್, ವಾನಿಂದು ಹಸರಂಗ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಅಭ್ಯಾಸದ ವೇಳೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.
ಭರ್ಜರಿ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್ ಆರ್ಸಿಬಿ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ದಿನೇಶ್ ಕಾರ್ತಿಕ್, ಮುಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಪ್ರಮುಖ ಆಟಗಾರರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಸೂರ್ಯಕುಮಾರ್ ಯಾದವ್ ಫಾರ್ಮ್ ತಂಡಕ್ಕೆ ಚಿಂತೆಯನ್ನುಂಟುಮಾಡಿದೆ.
ಟಿಮ್ ಡೇವಿಡ್, ತಿಲಕ್ ವರ್ಮಾ, ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಫ್ರಾ ಆರ್ಚರ್, ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಮೇಲೆ ಅವಲಂಬಿತವಾಗಿದೆ.
ಸನ್ರೈಸರ್ಸ್ vs ರಾಯಲ್ಸ್
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್, ಸಂಜು ಸ್ಯಾಮ್ಸನ್ ಮುನ್ನಡೆಸುವ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಐಪಿಎಲ್ 2022 ಟೂರ್ನಿಯ ರನ್ನರ್ ಅಪ್ ರಾಜಸ್ಥಾನ ರಾಯಲ್ಸ್ ತಂಡ ಈ ಬಾರಿ ಗೆಲುವಿನ ಆರಂಭದ ನಿರೀಕ್ಷೆಯಲ್ಲಿದೆ. ಆರ್ಆರ್ ಎಲ್ಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಯುಜ್ವೇಂದ್ರ ಚಹಲ್, ಆರ್.ಅಶ್ವಿನ್ ಆ್ಯಡಂ ಜಂಪಾ ಅವರನ್ನೊಳಗೊಂಡಿರುವ ತಂಡದ ಸ್ಪಿನ್ ವಿಭಾಗ ಬಲಿಷ್ಠವಾಗಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ಒಬೇದ್ ಮೆಕಾಯ್, ನವದೀಪ್ ಸೈನಿ ಇದ್ದಾರೆ. ರಾಯಲ್ಸ್ ತಂಡ ಬ್ಯಾಟಿಂಗ್ನಲ್ಲಿ ನಾಯಕ ಸಂಜು ಸ್ಯಾಮ್ಸನ್, ಜೋ ರೂಟ್, ಶಿಮ್ರಾನ್ ಹೆಟ್ಮೆಯರ್ ಮತ್ತು ಜೇಸನ್ ಹೋಲ್ಡರ್ ಮೇಲೆ ಭರವಸೆ ಇಟ್ಟಿದೆ.
ಹೈದರಾಬಾದ್ ತಂಡದ ನಾಯಕ ಏಡನ್ ಮರ್ಕರಂ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಎಸ್ಆರ್ಎಚ್ ಪರ ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಗ್ಲೆನ್ ಪಿಲಿಪ್ಸ್, ಸುಂದರ್, ನಟರಾಜನ್, ಉಮ್ರಾನ್ ಮಲಿಕ್ ರಂತಹ ಸ್ಟಾರ್ ಆಟಗಾರರಿದ್ದಾರೆ.