- ಹಲವು ಆಟಗಳನ್ನು ಆಡುತ್ತಿದ್ದರೂ ಕ್ರಿಕೆಟ್ ಕಡೆಗೆ ಆಕರ್ಷಣೆ ಎಂದ ಸಚಿನ್ ತೆಂಡೂಲ್ಕರ್
- ಬಾಯಿಯ ಆರೋಗ್ಯ ಉತ್ತಮವಾಗಿದ್ದರೆ ದೈಹಿಕ ಆರೋಗ್ಯವೂ ಉತ್ತಮ ಎಂದು ಸಲಹೆ
ಭಾರತೀಯ ಕ್ರಿಕೆಟ್ನ ದಂತಕತೆ ಸಚಿನ್ ತೆಂಡೂಲ್ಕರ್ ತಂಬಾಕು ಜಾಹಿರಾತಿನಲ್ಲಿ ನಟಿಸದಿರುವ ತೀರ್ಮಾನದ ಹಿಂದಿನ ಸತ್ಯ ಬಿಚ್ಚಿಟ್ಟಿದ್ದಾರೆ.
ಬಾಯಿಯ ನೈರ್ಮಲ್ಯ ಅಭಿಯಾನದ ಭಾಗವಾಗಿರುವ ಮಹಾರಾಷ್ಟ್ರ ಸರ್ಕಾರದ ಸ್ವಚ್ಛ ಮುಖ್ ಅಭಿಯಾನ್ಗೆ ನಗುವಿನ ರಾಯಭಾರಿಯಾಗಿ ನೇಮಕಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ತಂದೆಯ ಸಲಹೆಯ ಮೇರೆಗೆ ತಂಬಾಕು ಜಾಹೀರಾತಿನಿಂದ ದೂರವಿದ್ದೆ” ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
“ನಾನು ಭಾರತ ಕ್ರಿಕೆಟ್ ತಂಡಕ್ಕಾಗಿ ಆಡಲು ಆರಂಭಿಸಿದಾಗ, ಆಗಷ್ಟೇ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದೆ. ಆಗ ನನಗೆ ಜಾಹೀರಾತುಗಳಲ್ಲಿ ನಟಿಸಿ, ಉತ್ಪನ್ನಗಳನ್ನು ಪ್ರಚಾರ ಮಾಡಲು ಅನೇಕ ಅವಕಾಶಗಳು ಬಂದಿದ್ದವು. ಆದರೆ, ಎಂದಿಗೂ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸದಂತೆ ನನಗೆ ನನ್ನ ತಂದೆ ಹೇಳಿದ್ದರು. ಅಂತೆಯೇ ನನಗೆ ಬಂದಿದ್ದ ಅನೇಕ ತಂಬಾಕು ಜಾಹೀರಾತು ಅವಕಾಶಗಳನ್ನು ನಾನು ಒಪ್ಪಿಕೊಳ್ಳಲಿಲ್ಲ. ಜೊತೆಗೆ ನನ್ನ ಜೀವನದ ಗುರಿಗಳನ್ನು ಸಾಧಿಸುವುದಕ್ಕೆ ದೈಹಿಕ ಆರೋಗ್ಯದ ಬಗ್ಗೆ ಶಿಸ್ತನ್ನು ಬೆಳೆಸಿಕೊಳ್ಳುವುದು, ಜಾಗೃತರಾಗಿರುವುದು ಬಹಳ ಮುಖ್ಯವಾಗಿತ್ತು” ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2023 | ಈ ಬಾರಿ ಪಂದ್ಯದ ದಿಕ್ಕು ಬದಲಿಸಿದ 9 ಆಟಗಾರರು
“ಬಾಯಿಯ ಆರೋಗ್ಯ ಉತ್ತಮವಾಗಿದ್ದರೆ ದೈಹಿಕ ಆರೋಗ್ಯವೂ ಉತ್ತಮವಾಗಿರಲಿದೆ. ಶೇ 50ರಷ್ಟು ಮಕ್ಕಳು ಬಾಯಿಯ ಕಾಯಿಲೆಗಳನ್ನು ಹೊಂದಿದ್ದಾರೆ ಮತ್ತು ಅದು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ವಿಷಯವು ಅವರ ಆತ್ಮವಿಶ್ವಾಸವನ್ನು ಹಾಳುಮಾಡುತ್ತದೆ” ಎಂದು ಸಚಿನ್ ತಿಳಿಸಿದ್ದಾರೆ.
“ನಾನು ಬಾಲ್ಯದಲ್ಲಿ ಬಹಳಷ್ಟು ಕ್ರೀಡೆಗಳನ್ನು ಆಡುತ್ತಿದ್ದೆ. ಆದರೆ ಕ್ರಿಕೆಟ್ ಬಗ್ಗೆ ಆಕರ್ಷಿತನಾಗಿದ್ದೆ. ಶಿಸ್ತು ರೂಢಿಸಿಕೊಳ್ಳಬೇಕಾದರೆ ಸದೃಢ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂಬುದನ್ನು ವರ್ಷದಿಂದ ವರ್ಷಕ್ಕೆ ಕಂಡುಕೊಂಡೆ. ಇತ್ತೀಚಿನ ದಿನಗಳಲ್ಲಿ ಸದೃಢ ಆರೋಗ್ಯ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಆದರೆ ದೈಹಿಕ ಸದೃಢತೆಯಷ್ಟೆ ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ” ಎಂದು ತೆಂಡೂಲ್ಕರ್ ಹೇಳಿದರು.
ಬಾಯಿ ನೈರ್ಮಲ್ಯ ಅಭಿಯಾನವು ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಮತ್ತು ಉತ್ತಮ ಬಾಯಿ ನೈರ್ಮಲ್ಯದ ಮಹತ್ವದ ಬಗ್ಗೆ ಭಾರತೀಯರಿಗೆ ಶಿಕ್ಷಣ ನೀಡುತ್ತಿರುವ ಭಾರತೀಯ ದಂತ ಸಂಘದ ರಾಷ್ಟ್ರೀಯ ಉಪಕ್ರಮವಾಗಿದೆ.