ಅಂತಾರಾಷ್ಟ್ರೀಯ ಕ್ರಿಕೆಟ್ ಬದಲು ಐಪಿಎಲ್ ಟೂರ್ನಿಯನ್ನು ಆಟಗಾರರು ಆದ್ಯತೆಯಾಗಿ ಪರಿಗಣಿಸುವುದರ ವಿರುದ್ಧ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ʻವಿಶ್ವ ಟೆಸ್ಟ್ ಚಾಂಪಿಯನ್ಶಿಪ್ʼ ಫೈನಲ್ ಪಂದ್ಯದ ಮೊದಲ ಮೂರು ದಿನಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ಟೀಮ್ ಇಂಡಿಯಾ ವಿಫಲವಾಗಿದೆ. ಫೈನಲ್ ಪಂದ್ಯದ ಮೊದಲ ದಿನ ಕೇವಲ ಮೂರು ವಿಕೆಟ್ ಪಡೆಯಲಷ್ಟೇ ಭಾರತದ ಬೌಲರ್ಗಳು ಯಶಸ್ವಿಯಾಗಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ಆಸಿಸ್ ಕೈ ಮೇಲಾಗಿದೆ. ಈ ಹಿನ್ನಲೆಯಲ್ಲಿ ಮಾತನಾಡಿರುವ ಶಾಸ್ತ್ರಿ, ʻಆಟಗಾರರು ರಾಷ್ಟ್ರೀಯ ತಂಡ ಅಥವಾ ಐಪಿಎಲ್ ನಡುವೆ ತಮ್ಮ ʻಆದ್ಯತೆʼಯನ್ನು ನಿರ್ಧರಿಸಬೇಕಿದೆʼ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿರುವ ರವಿ ಶಾಸ್ತ್ರಿ ʻ ರಾಷ್ಟ್ರೀಯ ತಂಡ ಅಥವಾ ಐಪಿಎಲ್ ನಡುವೆ ಆಟಗಾರರು ತಮ್ಮ ʻಆದ್ಯತೆʼಯನ್ನು ನಿರ್ಧರಿಸಬೇಕಿದೆ. ಭಾರತೀಯ ಆಟಗಾರರ ಐಪಿಎಲ್ ಒಪ್ಪಂದದಲ್ಲಿ ಬಿಸಿಸಿಐ ಕೆಲವೊಂದು ಷರತ್ತುಗಳನ್ನು ಹಾಕುವ ಅಗತ್ಯವಿದೆʼ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ಮತ್ತು ವೀಕ್ಷಕ ವಿವರಣೆಗಾರರಾಗಿರುವ ರವಿ ಶಾಸ್ತ್ರಿ ಹೇಳಿದ್ದಾರೆ.
ʻಫ್ರಾಂಚೈಸಿ ಕ್ರಿಕೆಟ್ಅನ್ನು ಆದ್ಯತೆಯಾಗಿ ಕಾಣುವ ಆಟಗಾರರು ʻವಿಶ್ವ ಟೆಸ್ಟ್ ಚಾಂಪಿಯನ್ಶಿಪ್ʼ ಫೈನಲ್ ಪಂದ್ಯʼ ಸೇರಿದಂತೆ ಅತಿ ಮಹತ್ವದ ಐಸಿಸಿ ಟೂರ್ನಿಗಳನ್ನು ಮರೆತುಬಿಡಬೇಕು. ಮತ್ತೊಂದೆಡೆ, ರಾಷ್ಟ್ರೀಯ ತಂಡದ ಹಿತದೃಷ್ಟಿಯಿಂದ ಐಪಿಎಲ್ನಿಂದ ಹೊರಗುಳಿಯಲು ಆಟಗಾರರು ನಿರ್ಧರಿಸಿದರೆ ಅದಕ್ಕೆ ಬಿಸಿಸಿಐ ಅವಕಾಶ ನೀಡಬೇಕು ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ.
ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 223/6
4 ವಿಕೆಟ್ ನಷ್ಟದಲ್ಲಿ 123 ರನ್ ಗಳಿಂದ ಮೂರನೇ ದಿನದಾಟ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ, ಶನಿವಾರ, ಭೊಜನ ವಿರಾಮದ ವೇಳೆಗೆ 6 ವಿಕೆಟ್ ನಷ್ಟದಲ್ಲಿ 223 ರನ್ಗಳಿಸಿದೆ. ಆ ಮೂಲಕ ದ್ವಿತೀಯ ಇನ್ನಿಂಗ್ಸ್ನಲ್ಲಿ ಒಟ್ಟು 396 ರನ್ಗಳ ಮುನ್ನಡೆ ಸಾಧಿಸಿದೆ.
50 ರನ್ಗಳಿಸಿರುವ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಮತ್ತು 24 ರನ್ಗಳೊಂದಿಗೆ ಮಿಚೆಲ್ ಸ್ಟಾರ್ಕ್ ಕ್ರೀಸ್ನಲ್ಲಿದ್ದಾರೆ.