- ಕೆರೆಯ ಬಳಿ ಮನರಂಜನಾ ಪ್ರದೇಶ ನಿರ್ಮಾಣ
- 300 ಜಾತಿಯ ಪಕ್ಷಿಗಳು ಕೆರೆಗೆ ಭೇಟಿ
ಮಂಗಳೂರಿನ ಕಾವೂರು ಕೆರೆ ಪುನರುಜ್ಜೀವನದ ಬಹುತೇಕ ಕಾಮಗಾರಿಗಳನ್ನು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್ಸಿಎಲ್) ಪೂರ್ಣಗೊಳಿಸಿದೆ. ಮುಂದಿನ ವಾರ ಲೋಕಾರ್ಪಣೆ ಮಾಡುವ ನಿರೀಕ್ಷೆಯಿದೆ. 8.3 ಎಕರೆ ವಿಸ್ತೀರ್ಣವಿರುವ ಕೆರೆಯು ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
ಗುಜ್ಜರಕೆರೆಯ ನಂತರ ಎಂಎಸ್ಸಿಎಲ್ನ ಎರಡನೇ ಕೆರೆ ಅಭಿವೃದ್ಧಿ ಯೋಜನೆ ಇದಾಗಿದೆ. 2020ರಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕೆರೆಯ ಪುನರುಜ್ಜೀವನ ಕಾರ್ಯಗಳು ಪ್ರಾರಂಭವಾಗಿದ್ದವು. ಆದರೆ, ಕೊರೊನಾ ಕಾರಣದಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಅಲ್ಲದೆ, ಅತಿಕ್ರಮಣಗಳು ಸೇರಿದಂತೆ ಹಲವು ಸಮಸ್ಯೆಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದವು. ರಾಜ್ಯ ಸರ್ಕಾರದ ಕೆರೆ ಅಭಿವೃದ್ಧಿ ಸಮಿತಿಯೂ ಕೂಡ ಕೆರೆಗೆ ಭೇಟಿ ನೀಡಿ ಪರಿಶೀಲಿಸಿತ್ತು. ಇದಾದ ಬಳಿಕ ಕೆರೆ ಅಭಿವೃದ್ಧಿ ಕಾಮಗಾರಿ ಪುನರಾರಂಭಗೊಂಡಿತ್ತು.
“ಮಳೆನೀರು ಕೊಯ್ಲು ಯೋಜನೆಯ ಭಾಗವಾಗಿ ಕೆರೆಯ ಸುಧಾರಣೆ ಮತ್ತು ಉನ್ನತೀಕರಣವನ್ನು ಕೈಗೆತ್ತಿಕೊಳ್ಳಲಾಗಿದೆ. ಸುತ್ತಮುತ್ತಲಿನ ಪ್ರದೇಶದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯವನ್ನು ಸುಧಾರಿಸುವುದು ಮತ್ತು ಮನರಂಜನಾ ಪ್ರದೇಶವಾಗಿ ಪುನರಾಭಿವೃದ್ಧಿ ಮಾಡುವುದು ಇದರ ಉದ್ದೇಶವಾಗಿದೆ” ಎಂದು ಎಂಎಸ್ಸಿಎಲ್ ಜನರಲ್ ಮ್ಯಾನೇಜರ್ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್ ತಿಳಿಸಿದ್ದಾರೆ.
“827 ಮೀಟರ್ ಉದ್ದದ ನಿರಂತರ ವಾಕಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್, ಔಟ್ಲೆಟ್ನಲ್ಲಿ ಅಸ್ತಿತ್ವದಲ್ಲಿರುವ ಸ್ಲೂಯಿಸ್ ಗೇಟಿನ ಆಧುನೀಕರಣ, ನವೀಕರಣ, ಆಸನ ಮತ್ತು ಮನರಂಜನಾ ಪ್ರದೇಶದ ನಿರ್ಮಾಣ ಹಾಗೂ ಕರೆಯ ಸುತ್ತ ಸುರಕ್ಷತೆಗಾಗಿ ಒಳ ಅಂಚಿನಲ್ಲಿ ಚೈನ್ ಲಿಂಕ್ ಬೇಲಿಯನ್ನು ನಿರ್ಮಿಸಲಾಗಿದೆ. ನಾಲ್ಕು ಚಕ್ರದ ವಾಹನ ಮತ್ತು ದ್ವಿಚಕ್ರ ವಾಹನ ನಿಲುಗಡೆ ಪ್ರದೇಶವನ್ನೂ ಕೂಡ ಅಭಿವೃದ್ಧಿಪಡಿಸಲಾಗಿದೆ” ಎಂದು ಅರುಣ್ ಪ್ರಭಾ ಕೆ.ಎಸ್ ತಿಳಿಸಿದ್ದಾರೆ.
“ಮೇರಿಹಿಲ್, ಬೊಂದೆಲ್ ಮತ್ತು ಕಾವೂರು ಸೇರಿದಂತೆ ಮೂರು ಪ್ರಮುಖ ಸ್ಥಳಗಳಿಂದ ಕೆರೆಗೆ ಒಳಹರಿವು ಬರುತ್ತದೆ. ಈ ಸರೋವರವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಹಿಂದೆ, ಮಳೆ ಬೀಳುತ್ತಿದ್ದ ಸಮಯದಲ್ಲಿ ತ್ಯಾಜ್ಯವು ಕೆರೆಯಲ್ಲಿ ಸಂಗ್ರಹವಾಗುತ್ತಿತ್ತು. ಯುಜಿಡಿ ಚರಂಡಿಗಳಿಂದ ಸೋರುವಿಕೆಯಿಂದ ತ್ಯಾಜ್ಯನೀರು ಕೆರೆಗೆ ಸೇರುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ” ಎಂದು ಅವರು ಹೇಳಿದರು.
“ಕೆರೆಯು ಈಗಾಗಲೇ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತಿದೆ. ಕನಿಷ್ಠ 300 ಜಾತಿಯ ಪಕ್ಷಿಗಳು ಕೆರೆಗೆ ಭೇಟಿ ನೀಡಲು ಪ್ರಾರಂಭಿಸಿವೆ. ಇದು ಪಕ್ಷಿ ವೀಕ್ಷಕರಿಗೆ ಸಂತೋಷವನ್ನುಂಟು ಮಾಡಿದೆ. ರಾತ್ರಿ ವೇಳೆ ಕೆರೆಯ ನೋಟವು ಅದ್ಭುತವಾಗಿ ಕಾಣುತ್ತದೆ. ಕಾರಂಜಿಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಇದರಿಂದ ಕೆರೆಯ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ” ಎಂದು ಹೇಳಿದರು.
“ನೀರಿನ ಗುಣಮಟ್ಟವು ಸುಧಾರಿಸುತ್ತಿದ್ದು, ಅದನ್ನು ಅಪೇಕ್ಷಣೀಯ ಮಟ್ಟಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇದರ ನಡುವೆ ಎನ್ಐಟಿಕೆ ಸುರತ್ಕಲ್ ಮತ್ತು ಎಜೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೂಡ ಸರೋವರದ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ” ಎಂದರು.