- ಈಶ್ವರಪ್ಪ ನೂರ್ಕಾಲ ಬದುಕಿರಲಿ ಎಂದ ಕಾಂಗ್ರೆಸ್
- ಶೆಟ್ಟರ್ ಅವರನ್ನು ಟಾರ್ಗೆಟ್ ಮಾಡಿಲ್ಲವೆಂದ ಈಶ್ವರಪ್ಪ
ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ನಲ್ಲಿಯೇ ಸಾಯಲಿ ಎಂದಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರೇನು ಚಿರಂಜೀವಿಯೇ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬಗ್ಗೆ ಹೇಳಿಕೆ ನೀಡಿದ್ದ ಈಶ್ವರಪ್ಪ, “’ಜಗದೀಶ ಶೆಟ್ಟರ್ ಅವರನ್ನು ಬಿಜೆಪಿಗೆ ವಾಪಸ್ ಬರುವಂತೆ ಕರೆದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಅವರು ಅಲ್ಲಿಯೇ ಇದ್ದು ಸಾಯಲಿ” ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಜಗದೀಶ್ ಶೆಟ್ಟರ್ ಅವರ ಸಾವನ್ನು ಬಯಸುತ್ತಿರುವ ಈಶ್ವರಪ್ಪನವರೇನು ಚಿರಂಜೀವಿಯೇ?” ಎಂದು ಪ್ರಶ್ನಿಸಿದೆ.
“ಲಿಂಗಾಯತ ನಾಯಕರೊಬ್ಬರನ್ನು ‘ಸಾಯಲಿ’ ಎಂದು ಹೇಳುವಷ್ಟು ಲಿಂಗಾಯತರ ಮೇಲೆ ದ್ವೇಷ ಏಕೆ ಬಿಜೆಪಿಗೆ? ಬಿಜೆಪಿ ಅಕ್ಷರಶಃ ದ್ವೇಷವನ್ನೇ ಉಸಿರಾಡುತ್ತಿದೆ, ಅದೇ ಅವರ ನೈಜ ಸಂಸ್ಕೃತಿ, ಸಂಪ್ರದಾಯಗಳು” ಎಂದು ವ್ಯಂಗ್ಯವಾಡಿದೆ.
“ನಾವು ಈಶ್ವರಪ್ಪ ಅವರು ನೂರ್ಕಾಲ ಬದುಕಿರಲಿ ಎಂದು ಹಾರೈಸುತ್ತೇವೆ” ಎನ್ನುವ ಮೂಲಕ ಕಾಂಗ್ರೆಸ್ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಮೀಕ್ಷೆ | ಬಿಜೆಪಿಗೆ ನಿದ್ರಾಭಂಗ; ಕಾಂಗ್ರೆಸ್ನಲ್ಲಿ ಹೊಸ ಹುಮ್ಮಸ್ಸು
ಹುಬ್ಬಳಿ ಪ್ರಚಾರ ವಿಷಯವಾಗಿ ಮಾತನಾಡಿದ್ದ ಈಶ್ವರಪ್ಪ, “ನಾವು ಶೆಟ್ಟರ್ ಅವರನ್ನು ಟಾರ್ಗೆಟ್ ಮಾಡಿಲ್ಲ. ನಾವೆಲ್ಲರೂ ವಿವಿಧೆಡೆ ಪ್ರಚಾರಕ್ಕೆ ಹೋಗುವಂತೆ ಹುಬ್ಬಳ್ಳಿಯಲ್ಲೂ ಪ್ರಚಾರ ಮಾಡುತ್ತಿದ್ದೇವೆ” ಎಂದಿದ್ದಾರೆ.