ಶೋಷಿತ ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಿ, ಬಾಬಾ ಸಾಹೇಬ್ ಅಂಬೇಡ್ಕರರು ಕೊಟ್ಟ ಸಂವಿಧಾನದ ಅಡಿಯಲ್ಲಿ ನ್ಯಾಯ ನೀಡಿ ನಮ್ಮ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಆಮರಣಾಂತ ಪ್ರತಿಭಟನೆ ನಡೆಸುತ್ತಿದೆ.
ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ದಸಂಸ ಕಾರ್ಯಕರ್ತರು ಮಂಗಳವಾರದಿಂದ ನ್ಯಾಯ ಸಿಗುವವರೆಗೂ ಆಮರಣಾಂತ ಉಪವಾಸ ಸತ್ಯಾಗ್ರಹ ಹಾಗೂ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ದಸಂಸ ಮುಖಂಡರು ತಾಲೂಕು ಕಚೇರಿ ಮುಂಭಾಗದಲ್ಲಿ ಮಳೆ ಚಳಿ ಎನ್ನದೆ ಧರಣಿ ನಡೆಸುತ್ತಿದೆ. “ಈವರೆಗೆ ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಸರ್ಕಾರ ಪತ್ರ ವ್ಯವಹಾರ ನಡೆಸಿದೆಯೇ ವಿನಃ ದಲಿತ ಹೋರಾಟಗಾರರ ಹೋರಾಟಕ್ಕೆ ಸ್ಪಂದಿಸದೆ ಅನ್ಯಾಯ ಎಸಗಿದೆ” ಎಂದು ಆರೋಪಿಸಿದರು.
“ತಮ್ಮ ಹೋರಾಟಕ್ಕೆ ಸ್ಪಂದನೆ ಸಿಗದ ಕಾರಣಕ್ಕಾಗಿ ಇಂದಿನಿಂದ ಆಮರಣಾಂತ ಉಪವಾಸ ಮಾಡುತ್ತಿದ್ದು, ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಮಾಡುತ್ತೇವೆ. ಜೊತೆಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಹಿರಿಯ ಮುಖಂಡ ಜಗದೀಶ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಹಗಲು, ಇರುಳು ಎನ್ನದೆ ಧರಣಿ ಕುಳಿತರೂ ನಮ್ಮನ್ನು ಹೀನಾಯವಾಗಿ ನಡೆಸಿಕೊಂಡಿರುವ ವ್ಯವಸ್ಥೆ ವಿರುದ್ಧ ಮತದಾನ ಬಹಿಷ್ಕಾರ ಮಾಡುತ್ತೇವೆ” ಎಂದು ತಿಳಿಸಿದರು.
ರಾಮು ಮಾತನಾಡಿ, “ಮುಮ್ಮಡಿಕಾವಲು ಗ್ರಾಮದ ಸರ್ವೆ ನಂ 01ರ ದರಖಾಸ್ತು ಜಮೀನನ್ನು ಪಕ್ಕಾ ಪೋಡು ದುರಸ್ತಿ ಮಾಡಿಕೊಡುವಂತೆ, ಕೊಣಸೂರು ಗ್ರಾಮದ ಭೂಮಿ ಸಮಸ್ಯೆಯನ್ನು ಬಗೆಹರಿಸುವಂತೆ, ಬೆಣಗಾಲು ಗ್ರಾಮದ ಬಿಡಿಒ ಜಾಗವನ್ನು ರಕ್ಷಿಸುವಂತೆ, ಕದರೇಗೌಡನಕೊಪ್ಪಲು ಗ್ರಾಮದ ಗ್ರಾಮ ಠಾಣವನ್ನು ಬಿಡಿಸಿ ಪರಿಶಿಷ್ಟ ಜಾತಿಗೆ ಸೇರಿದ ವಸತಿ ರಹಿತರಿಗೆ ನೀಡುವಂತೆ, ದೊಡ್ಡಹೊಸೂರು ಗ್ರಾಮದ ದಲಿತ ವಿಧವೆ ಮಹಿಳೆ ಚನ್ನಮ್ಮನ ಜಮೀನನ್ನು ಬಿಡಿಸಿಕೊಡುವಂತೆ ಅಧಿಕಾರಿಗಳಿಗೆ, ಸರ್ಕಾರಕ್ಕೆ ಕೋರಿದ್ದರೂ ಈವರೆಗೆ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.
ಮಾಲಂಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಾ. ಆಶಾರವರು ನರೇಗಾ ಯೋಜನೆಯಲ್ಲಿ ಅಕ್ರಮವೆಸಗಿ ಮರಣ ಹೊಂದಿರುವ ವ್ಯಕ್ತಿಯ ಹೆಸರಿಗೆ ಕೂಲಿ ಹಣ ನೀಡಿ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿರುವುದರಿಂದ ಮತ್ತು ಪರಿಶಿಷ್ಟ ಜಾತಿಯವರಿಗೆ ಕೂಲಿ ಕೆಲಸ ನೀಡದೆ ತೊಂದರೆ ನೀಡಿರುವುದರಿಂದ ಅವರನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಹಾಗೂ ಇನ್ನೂ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ 2022ರ ಮೇ 04ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, ಈವರೆಗೆ ದಲಿತರ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ದಲಿತ ಮುಖಂಡ ದೊಡ್ಡಯ್ಯ ಮಾತನಾಡಿ, “ಇನ್ನಾದರೂ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಬೇಕು. ನಮ್ಮ ಬೇಡಿಕೆ ಈಡೇರಿಸಿ ದಲಿತರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ನಮಗೆ ನೀಡಬೇಕಾದ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕನ್ನು ಕಿತ್ತುಕೊಂಡು ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಹಾಲಿನಪುಡಿ ಪೂರೈಕೆ ಸ್ಥಗಿತ; ವಿತರಣೆಗೆ ಎಐಡಿಎಸ್ಒ ಆಗ್ರಹ
“ದಲಿತರಿಗೆ ಅನ್ಯಾಯ ಆಗಿರುವುದನ್ನು ದಾಖಲೆ ಸಹಿತ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಏನೂ ಗೊತ್ತಿಲ್ಲದವರ ಹಾಗೆ ಆಗೊಮ್ಮೆ ಈಗೊಮ್ಮೆ ಸಭೆ ನಡೆಸಿ ಅಲ್ಲಿಗೆ ಕೈ ತೊಳೆದುಕೊಳ್ಳುತ್ತಿದ್ದಾರೆಯೇ, ಹೊರತು ದಲಿತರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಇದಕ್ಕೆಲ್ಲ ಸ್ಥಳೀಯ ಪ್ರತಿನಿಧಿಗಳು, ಎಂಎಲ್ಎ ಕುಮ್ಮಕ್ಕು ಕೂಡ ಇದೆ” ಎಂದು ಆರೋಪಿಸಿದರು.
“ದಲಿತ ಹೋರಾಟಗಾರರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿರುವ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳಬೇಕು” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಸಂಸ ಕಾರ್ಯಕರ್ತರು ಕೃಷ್ಣಮೂರ್ತಿ, ಚಂದ್ರು, ಉಮೇಶ, ಲಕ್ಷ್ಮಿ, ಪ್ರಕಾಶ್, ಹರೀಶ, ಮೂರ್ತಿ ಸೇರಿದಂತೆ ಇತರರು ಇದ್ದರು.