ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ. ಆದರೆ, ಜಿಲ್ಲಾ ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ಅಭ್ಯರ್ಥಿ ಬದಲಾವಣೆಗೆ ಒತ್ತಾಯಗಳು ಕೇಳಿಬಂದಿವೆ. ಅಭ್ಯರ್ಥಿ ಬದಲಾವಣೆಗಾಗಿ ಕಾರ್ಯಕರ್ತರಲ್ಲಿ ಅಭಿಪ್ರಾಯ ರೂಪಿಸುತ್ತಿರುವ ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಅವರು ಮಾರ್ಚ್ 24ರಂದು ತಮ್ಮ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ.
ಮೂಲಗಳ ಪ್ರಕಾರ ಇಂದು ಸಂಜೆ 5 ಗಂಟೆಗೆ ಶಿರಮಗೊಂಡನಹಳ್ಳಿ ಎಸ್ಎಂಆರ್ ನಿವಾಸದಲ್ಲಿ ಸಭೆ ನಡೆಯಲಿದ್ದು, ಹಲವು ವಿಚಾರಗಳ ಕುರಿತಂತೆ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಮಾಜಿ ಶಾಸಕ ಗುರುಸಿದ್ದನಗೌಡರು, ಭರತ್ ಹೋಟೆಲ್ ಮಾಲೀಕ ಪರಾಜಿತ ಅಭ್ಯರ್ಥಿ ಅಜಯ್ ಕುಮಾರ್, ಶಿವಯೋಗಿ ಸ್ವಾಮಿ, ಬಸವರಾಜ್ ನಾಯ್ಕ್, ಮಾಡಾಳ್ ಮಲ್ಲಿಕಾರ್ಜುನ್, ಆರೈಕೆ ಯ ಡಾ. ರವಿಕುಮಾರ್, ಲೋಕಿಕೆರೆ ನಾಗರಾಜ್, ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಇದೆ.
ಇತ್ತೀಚೆಗೆ ಎಸ್. ಎ. ರವೀಂದ್ರನಾಥ್ ಅವರು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪರನ್ನು ಭೇಟಿ ಮಾಡಿದ ಬಳಿಕ ಕರೆದಿರುವ ಸಭೆ ಇದಾಗಿದ್ದು, ತುಂಬಾನೇ ಮಹತ್ವ ಪಡೆದುಕೊಂಡಿದೆ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಬೇಕೋ ಬೇಡವೋ, ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಬರುತ್ತಿರುವ ಒತ್ತಡ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಒತ್ತಡ ಸೇರಿದಂತೆ ಎಲ್ಲಾ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಿಎಂ ಬಿ. ಎಸ್. ವೈ ಅವರೇ ಸಂಧಾನ ನಡೆಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಬದಲಾಗಬೇಕು ಎಂದು ಬಂಡೆದ್ದವರ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ, ಹೈಕಮಾಂಡ್ ನಾಯಕರೂ ಸಹ ಭಿನ್ನ ರಾಗ ಎತ್ತಿರುವ ನಾಯಕರನ್ನು ಸಮಾಧಾನಪಡಿಸುವ ಜವಾಬ್ದಾರಿಯನ್ನು ಯಡಿಯೂರಪ್ಪರಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಅಸಮಾಧಾನಗೊಂಡಿರುವ ರವೀಂದ್ರನಾಥ್ ಅವರು ಯಡಿಯೂರಪ್ಪರ ಕಾಲದಿಂದಲೂ ಬಿಜೆಪಿ ಕಟ್ಟಿ ಬೆಳೆಸಿದವರು. 50 ವರ್ಷ ರಾಜಕೀಯ ಮಾಡಿದವರು. ಬಿಜೆಪಿಗೆ ಎಂದಿಗೂ ದ್ರೋಹ ಬಗೆದವರಲ್ಲ. ಮಾಜಿ ಶಾಸಕ ಗುರುಸಿದ್ದನಗೌಡರು, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಿರಿಯರು, ಯಡಿಯೂರಪ್ಪರ ಆಪ್ತರು. ಇದರಿಂದ ಯಡಿಯೂರಪ್ಪ ಅವರೇ ನೇರ ರಂಗಪ್ರವೇಶ ಮಾಡಿದರೆ ಸಮಸ್ಯೆ ಶೀಘ್ರ ಪರಿಹಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳ ಕುರಿತಂತೆ ರವೀಂದ್ರನಾಥ್ ಅವರು ಬಿಜೆಪಿ ಮುಖಂಡರು, ಕಾರ್ಯಕರ್ತರು, ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.