ಪರಿಸರದೊಂದಿಗಿನ ಸ್ನೇಹ ಎಂಥವರನ್ನೂ ಪುಳಕಿತಗೊಳಿಸುತ್ತದೆ ಎಂದು ಪದ್ಮಶ್ರೀ, ನಾಡೋಜ ಸಾಲುಮರದ ತಿಮ್ಮಕ್ಕ ಹೇಳಿದರು.
ತುಮಕೂರು ತಾಲೂಕು ಶ್ರೀವೀರಭದ್ರೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಪರಿಸರ ಸಂರಕ್ಷಣೆಗೆ ನಾವು ಮುಂದಾಗದಿದ್ದರೆ, ನಮ್ಮ ಮಕ್ಕಳು ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗದ ಅಗತ್ಯವಿದೆ. ನಾನಾಗಲಿ, ನನ್ನ ಪತಿಯಾಗಲಿ, ಪ್ರಶಸ್ತಿಯ ಆಸೆಯಿಂದ ಗಿಡಮರಗಳನ್ನು ನೆಡಲಿಲ್ಲ. ನಮಗೆ ಮತ್ತು ದಾರಿಹೋಕರ ನೆರಳಿಗೋಸ್ಕರ ರಸ್ತೆಯ ಇಕ್ಕೆಲಗಳಲ್ಲಿ ಆಲ, ಗೋಣಿ ಮರಗಳನ್ನು ನೆಟ್ಟು, ದೂರದಿಂದ ನೀರು ತಂದುಹಾಕಿ ಪೋಷಿಸಿದೆವು. ಇಂದಿಗೂ ಅವುಗಳನ್ನು ನೋಡಿದರೆ ಏನೋ ಸಂತೋಷವಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ. ಹಾಗಾಗಿ ಪರಿಸರದೊಂದಿಗಿನ ಸ್ನೇಹ ಎಂಥವರನ್ನೂ ಪುಳಕಿತಗೊಳಿಸುತ್ತದೆ” ಎಂದು ಪದ್ಮಶ್ರೀ ಸಾಲುಮರದ ತಿಮ್ಮಕ್ಕ ನುಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೇವೆ ಮರೆತ ಶಿಕ್ಷಣ ಕ್ಷೇತ್ರ ಉದ್ಯಮವಾಗಿದೆ: ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ
ನಮ್ಮ ಕಾಲದಲ್ಲಿ ಓದು, ಬರಹಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಅಲ್ಲದೆ ಹೆಣ್ಣು ಮಕ್ಕಳಿಗೆ ಓದು, ಬರಹ ಕಷ್ಟಾಸಾಧ್ಯವಾಗಿತ್ತು. ಇಂದು ಸರ್ಕಾರವೇ ಎಲ್ಲ ರೀತಿಯ ಸವಲತ್ತುಗಳನ್ನು ನೀಡಿ ಪ್ರೋತ್ಸಾಹ ನೀಡುತ್ತಿದೆ. ಇದರ ಲಾಭವನ್ನು ಪಡೆದುಕೊಂಡು ಉತ್ತಮ ಅಂಕಗಳೊಂದಿಗೆ ಒಳ್ಳೆಯ ಪ್ರಜೆಗಳಾಗಿ ಸಮಾಜಕ್ಕೆ, ತಂದೆ-ತಾಯಿಗಳಿಗೆ, ಓದಿದ ಶಾಲೆಗೆ ಕೀರ್ತಿ ತರಬೇಕು” ಎಂದು ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಜಣ್ಣ, ಎಸ್ ಗುರುಮೂರ್ತಿ, ಉದ್ಯಮಿ ಪ್ರಕಾಶ್ ಇದ್ದರು.