ಡಾ. ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಪುರಾತನ ಮಠಗಳ ಅಂತರಾಳದಿಂದ ಹೊರತೆಗೆದು, ಇಂದಿನ ಜನಸಾಮಾನ್ಯರ ಮನಸ್ಸಿಗೆ ತಲುಪಿಸಿದ ಶ್ರೇಷ್ಠ ಸಂಶೋಧಕ, ಲೇಖಕ ಹಾಗೂ ಸಮಾಜಸೇವಕ ಎಂದು ವಿಜಯಪುರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರ ಕಾರ್ಯದರ್ಶಿ ಡಾ. ಎಂ ಎಸ್ ಮದಭಾವಿ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ದತ್ತಿನಿಧಿ ಅಂಗವಾಗಿ ಹಸ್ತಪ್ರತಿ ತರಬೇತಿ ಹಾಗೂ ಜಾಗೃತಿ ಶಿಬಿರ-24ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ಡಾ. ಫ.ಗು. ಹಳಕಟ್ಟಿಯವರು ಕಾನೂನು ಪದವಿ ಪಡೆದು ಆಕಸ್ಮಿಕವಾಗಿ ಸಿಕ್ಕ ವಚನ ಹಸ್ತಪ್ರತಿಗಳ ಕಟ್ಟನ್ನು ನೋಡಿ ಅವರಿಗೆ ಆಸಕ್ತಿ ಮೂಡಿತು. ಹಾಗೆ ಪರಿಪೂರ್ಣತ್ವವನ್ನು ಪಡೆದುಕೊಂಡವರು ಹಳಕಟ್ಟಿ ವಚನ ಸಾಹಿತ್ಯ ಸಂಗ್ರಹಕ್ಕೆ ಅರವತ್ತು ವರ್ಷಗಳ ನಿರಂತರ ತಮ್ಮ ಬದುಕು ಮುಡಿಪಾಗಿಟ್ಟು, ಇಪ್ಪತ್ತು ವರ್ಷಗಳ ಕಾಲ ಹಸ್ತಪ್ರತಿಗಳ ಸಂಗ್ರಹದಲ್ಲಿ ತೊಡಗಿದ್ದರು. ಇವುಗಳು ಜನರ ಮನಸ್ಸಿಗೆ ತಲುಪಬೇಕು ಎಂದು ಯೋಚಿಸಿ, ಹಸ್ತಪ್ರತಿಗಳನ್ನು ಮುದ್ರಣ ರೂಪದಲ್ಲಿ ತರಬೇಕೆಂದು ವಚನ ಶಾಸ್ತ್ರಸಾರ ಭಾಗ 1ನ್ನು ಮುದ್ರಣಕ್ಕೆಂದು ಕಳುಹಿಸಿದರು. ಅದು ಆಗ ಧರ್ಮದ ಆಧಾರವಾಗಿದೆಯೆಂದು ತಿರಸ್ಕರಿಸಿದರು. ನಂತರ ಬೆಳಗಾವಿಯಲ್ಲಿ ಮುದ್ರಣಗೊಂಡಿತು. ತಮ್ಮ ಮನೆಯನ್ನು ಮಾರಿ ಸ್ವಂತ ಮುದ್ರಣ ಯಂತ್ರವನ್ನು ಖರೀದಿಸಿದರು” ಎಂದು ತಿಳಿಸಿದರು.
ವಿಜಯನಗರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಮಾತನಾಡಿ, “ಡಾ. ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯಕ್ಕೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ತಮ್ಮ ಕುಟುಂಬವನ್ನು ಮರೆತು ವಚನ ಸಾಹಿತ್ಯದ ಉಳಿವಿಗಾಗಿ ಶ್ರಮಪಟ್ಟ ದುಡಿದರು. ಇನ್ನು ಹಸ್ತಪ್ರತಿಗಳ ಸಂಗ್ರಹ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ಮತ್ತು ಬದ್ಧತೆ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ” ಎಂದರು.
ಇದನ್ನೂ ಓದಿದ್ದೀರಾ? ಹಾವೇರಿ | ಹದಗೆಟ್ಟ ರಸ್ತೆ; ಕರ್ಜಗಿ ಗ್ರಾಮಸ್ಥರ ಗೋಳು ಕೇಳುವವರಿಲ್ಲ
ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕನ್ನಡ ವಿಶ್ವವಿದ್ಯಾಲಯವು ಹಸ್ತಪ್ರತಿಶಾಸ್ತ್ರ ಅಧ್ಯಯನ ಶಿಬಿರದಿಂದ ನಮ್ಮ ಭಾರತೀಯ ಹಾಗೂ ಕರ್ನಾಟಕದ ಶಾಸ್ತ್ರ ಹಾಗೂ ವಚನ ಪರಂಪರೆಯನ್ನು ತಿಳಿಯುವ ಕೆಲಸ ಮಾಡಿರುವುದು ಅಭಿನಂದನೀಯ” ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರು ಹಾಗೂ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ನಿರ್ದೇಶಕರಾದ ಡಾ. ಎಫ್.ಟಿ. ಹಳ್ಳಿಕೇರಿ, ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.