ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಕಲಾ ಬಂಧುತ್ವ ವೇದಿಕೆ ದಾವಣಗೆರೆಯ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ನಡೆಯಲಿರುವ ಬೀದಿ ನಾಟಕ ಹಾಗೂ ಜನಪದ ಹಾಡುಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಾಯಿತು.

ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಹಾಗೂ ಜನಪದ ಗೀತೆಗಳ ಕಾರ್ಯಕ್ರಮವನ್ನು ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್ ಉದ್ಘಾಟಿಸಿ “ಕಲಾತಂಡಗಳು ಉತ್ತಮ ಪ್ರದರ್ಶನ ನೀಡಲಿ. ಇದರಿಂದ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ಉತ್ತಮ ಸಂದೇಶ ನೀಡಲು ಸಹಕಾರಿಯಾಗಲಿ” ಎಂದು ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು.

ಮಾನವ ಬಂಧುತ್ವ ವೇದಿಕೆ ಕರ್ನಾಟಕ ಸಂಘಟನೆಯು ರಾಜ್ಯಾದ್ಯಂತ ಬೀದಿ ನಾಟಕ ಮತ್ತು ಜನಪದ ಹಾಡುಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಕಲಾತಂಡಗಳು ತರಬೇತಿ ಪಡೆದು ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಲಿರುವ ಅಂಗವಾಗಿ ಕಾರ್ಯಕ್ರಮದ ಉದ್ಘಾಟನೆಯನ್ನು ಮೊದಲಿಗೆ ದಾವಣಗೆರೆ ಜಿಲ್ಲೆಯಿಂದ ಪ್ರಾರಂಭಿಸಲಾಯಿತು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ರಾಮಚಂದ್ರಪ್ಪ ಮಾತನಾಡಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿ ಜಿಲ್ಲೆಗೊಂದರಂತೆ ಜಿಲ್ಲೆಯ ಬೇರೆ ಭಾಗಗಳಲ್ಲಿ ಬೀದಿನಾಟಕ ಮತ್ತು ಜನಪದ ಗೀತೆಗಳ ಕಲಾಪ್ರದರ್ಶನ ನೀಡಲು ಕಲಾ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದ್ದು ಹಲವಾರು ಕಲಾತಂಡಗಳನ್ನು ರಚಿಸಿ ತರಬೇತಿ ನೀಡಲಾಗಿದೆ. ಈ ಕಲಾತಂಡಗಳು ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಲಿವೆ. ಇದರ ಅಂಗವಾಗಿ ಮೊದಲಿಗೆ ದಾವಣಗೆರೆಯಿಂದಲೇ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾರಂಭಿಸಲಾಗಿದೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದ್ವೇಷಿಸುವವರನ್ನು ನಾವು ಪ್ರೀತಿಸಬೇಕು ಬುದ್ಧ ಪ್ರಜ್ಞೆ, ಕರುಣೆ; ಪ್ರೊ.ಕೃಷ್ಣಪ್ಪ ಕಾರ್ಯಕ್ರಮದಲ್ಲಿ ದು ಸರಸ್ವತಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಮುನಿಯಪ್ಪ, ರುದ್ರಮುನಿ ಆವರಗೆರೆ, ಪ್ರಾಂಶುಪಾಲ ಪ್ರೊ. ಮಂಜಪ್ಪ, ನಿರ್ದೇಶಕ ಅಂಜಿನಪ್ಪ ಲೋಕಿಕೆರೆ, ವಕೀಲ ಅನೀಶ್ ಪಾಷಾ, ಹರೋಸಾಗರ ಸಿದ್ದರಾಮಣ್ಣ, ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಆದಿಲ್ ಖಾನ್, ಮಾನವ ಬಂಧುತ್ವ ವೇದಿಕೆಯ ಶಿವಕುಮಾರ್ ಮಾಡಾಳ್, ಹನುಮಂತಪ್ಪ, ಮತ್ತು ಕಲಾತಂಡಗಳ ಸದಸ್ಯರು ಹಾಜರಿದ್ದರು.