ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿಗಳನ್ನು ವಿರೋಧಿಸಿ 10 ಸೆಂಟ್ರಲ್ ಟ್ರೇಡ್ ಯೂನಿಯನ್ಗಳು ನಾಳೆ (ಜುಲೈ 9) ಭಾರತ ಬಂದ್ಗೆ ಕರೆ ಕೊಟ್ಟಿವೆ. ಈ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಸಾಧ್ಯತೆ ಇದ್ದು, ಬ್ಯಾಂಕ್, ಪೋಸ್ಟ್, ವಿಮೆ ಕಂಪನಿಗಳು, ಗಣಿ ಸಂಸ್ಥೆಗಳು, ಖಾಸಗಿ ಸಾರಿಗೆ ಸಂಸ್ಥೆಗಳ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಅಲ್ಲದೆ, ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಟ್ರೇಡ್ ಯೂನಿಯನ್ಗಳು ಆರೋಪಿಸಿವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಕಳೆದ ಕೆಲವು ತಿಂಗಳುಗಳಿಂದ ಈ ಬಂದ್ಗಾಗಿ ಸಿದ್ಧತೆ ನಡೆಸುತ್ತಿದ್ದವು. ಕೇಂದ್ರ ಸರ್ಕಾರದ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಕಳೆದ ವರ್ಷ ಸಲ್ಲಿಸಿದ 17 ಬೇಡಿಕೆಗಳನ್ನು ಈಡೇರಿಸದ ಕಾರಣ ಈ ಪ್ರತಿಭಟನೆ ನಡೆಯುತ್ತಿದೆ. ಬೇಡಿಕೆ ಶೀಘ್ರ ಜಾರಿಗೆ ಸರ್ಕಾರದ ಗಮನ ಸೆಳೆಯಲು ಮುಷ್ಕರಕ್ಕೆ ಸಂಘಟನೆಗಳು ಮುಂದಾಗಿವೆ.
ಈ ಬಗ್ಗೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಮರಜೀತ್ ಕೌರ್ ಅವರು ಮಾತನಾಡಿ, ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಬಂದ್ನಿಂದಾಗಿ ಬ್ಯಾಂಕಿಂಗ್, ಅಂಚೆ, ವಿಮೆ, ಕಲ್ಲಿದ್ದಲು ಗಣಿ, ಕಾರ್ಖಾನೆ ಮತ್ತು ಸಾರಿಗೆ ಸೇವೆಗಳಲ್ಲಿ ತೊಂದರೆಯಾಗಬಹುದು ಎಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಆಯೋಗದ ಅವಶ್ಯಕತೆ ಇದೆಯೇ?
ಶಾಲೆಗಳು ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ ಖಾಸಗಿ ಬಸ್ಗಳ ಸಿಬ್ಬಂದಿ ಬಂದ್ ಬೆಂಬಲಿಸಿ ಮುಷ್ಕರ ಕೈಗೊಂಡರೆ ಬಸ್ಗಳನ್ನು ಅವಲಂಬಿಸಿ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಬಹುದು.
ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ, ನೈರುತ್ಯ, ವಾಯವ್ಯ ಸಾರಿಗೆ ಹಾಗೂ ಬಿಎಂಟಿಸಿ ಬಸ್ಗಳು ಎಂದಿನಂತೆ ಸಂಚಾರ ನಡೆಸಲಿವೆ. ಈ 4 ನಿಗಮಗಳ ನೌಕರರು ಬಂದ್ಗೆ ಬೆಂಬಲಿಸಿ ಮುಷ್ಕರ ಮಾಡುತ್ತಿಲ್ಲ. ಬಸ್ಗಳು ಸಾಮಾನ್ಯ ದಿನಗಳಂತೆ ಸಂಚಾರ ನಡೆಸಲಿವೆ ಎಂದು ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿ ಖಚಿತಪಡಿಸಿದ್ದಾರೆ.
ಕರ್ನಾಟಕದ ಮಟ್ಟಿಗೆ ಆಟೋ, ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಮಾಲೀಕರು, ಸಂಘಟನೆಗಳು ಬಂದ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸೇವೆ ಎಂದಿನಂತೆ ಇರಲಿದೆ. ರೈಲ್ವೆ ಯೂನಿಯನ್ಗಳು ಈ ಭಾರತ್ ಬಂದ್ನಲ್ಲಿ ಭಾಗವಹಿಸುತ್ತಿಲ್ಲ.
ಯಾವ ಸೇವೆಗಳು ವ್ಯತ್ಯಯ
ಬ್ಯಾಂಕ್ಗಳು ( ರಾಜ್ಯ ಸಂಘಟನೆಗಳು ಖಚಿತ ಪಡಿಸಿಲ್ಲ)
ವಿಮೆ ಸಂಸ್ಥೆಗಳು
ಗಣಿ ಕೈಗಾರಿಕೆಗಳು
ಯಾವೆಲ್ಲಾ ಸಂಘಟನೆಗಳು ಬೆಂಬಲ ನೀಡುತ್ತಿವೆ?
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU)
ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್ (TUCC)
ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU)
ಲೇಬರ್ ಪ್ರೊಗ್ರೆಸ್ಸಿವ್ ಫೆಡರೇಷನ್ (LPF)
ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC)
ಹಿಂದ್ ಮಜ್ದೂರ್ ಸಭಾ (HMS)
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC)
ಸೆಲ್ಪ್ ಎಂಪ್ಲಾಯಿಡ್ ವುಮೆನ್ಸ್ ಅಸೋಸಿಯೇಷನ್ (SEWA)
ಪ್ರಮುಖ ಬೇಡಿಕೆಗಳು ಏನು?
ಸರ್ಕಾರ ಖಾಸಗೀಕರಣ ಸ್ಥಗಿತ
ಸಾರ್ವಜನಿಕ ವಲಯದಲ್ಲಿ ನೇಮಕಾತಿ ಹೆಚ್ಚಳ
ಕಾರ್ಮಿಕ ಕೂಲಿ ಹೆಚ್ಚಳ
ಭಾರತೀಯ ಕಾರ್ಮಿಕರ ಸಮ್ಮೇಳನ ಆಯೋಜನೆ
ಕಾರ್ಮಿಕರ ಕೆಲಸದ ಸಮಯ ಹೆಚ್ಚಳಗೊಳಿಸಬಾರದು
ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು
ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಯೋಜನೆಗಳಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಕಡಿತಗೊಳಿಸದೇ ಹೆಚ್ಚಿನ ಅನುದಾನ ನೀಡಬೇಕು
