ಶಿವಮೊಗ್ಗ, ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಸಂಘವು , ಕರ್ನಾಟಕದ ಮಹಾನ್ ವ್ಯಕ್ತಿಗಳಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ, ವೀರರಾಣಿ ಕಿತ್ತೂರು ಚನ್ನಮ್ಮ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಭಕ್ತ ಕನಕದಾಸ ಹಾಗೂ ಕೆಂಪೇಗೌಡರ ನಾಣ್ಯಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ದೇವದಾಸ ನಾಯಕ್, ಈವರೆಗೆ ದೇಶದ ವಿವಿಧೆಡೆಗಳ ಮಹಾನ್ ವ್ಯಕ್ತಿಗಳ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ 5 ಮತ್ತು 10 ರೂ. ನಾಣ್ಯಗಳನ್ನು ಚಲಾವಣೆಗೆ ಬಿಡುಗಡೆ ಮಾಡುವಂತೆ ಸಂಘವು ಕೇಂದ್ರವನ್ನು ಆಗ್ರಹಿಸಿದರು.
ಈ ಹಿಂದೆ ಯಾವುದೇ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ 5 ಅಥವಾ 10 ರೂಪಾಯಿ, ನಾಣ್ಯಗಳನ್ನು ಚಲಾವಣೆಗೆ ಬಿಡಲಾಗುತ್ತಿತ್ತು. ಆದರೆ ಈಗ ಈ ನಿಯಮ ಕೈಬಿಟ್ಟಿರುವುದರಿಂದ ಇಂತಹ ಮಹಾನ್ ವ್ಯಕ್ತಿಗಳ ನಾಣ್ಯಗಳನ್ನು ಸಂಗ್ರಹಿಸುವುದು ದುಬಾರಿಯಾಗಿ ಪರಿಣಮಿಸಿದೆ.
ಹೀಗಾಗಿ ಕೇಂದ್ರ ಸರ್ಕಾರ ಮಹಾನ್ ವ್ಯಕ್ತಿಗಳು ಸೇರಿದಂತೆ ಇತರೆ ವಿಶೇಷ ನಾಣ್ಯಗಳ ಜೊತೆಗೆ ಚಲಾವಣೆ ನಾಣ್ಯಗಳನ್ನು ಬಿಡುಗಡೆ ಮಾಡುವ ಮೂಲಕ ನಾಣ್ಯ ಸಂಗ್ರಾಹಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಪ್ರಪಂಚದ ಬಹುತೇಕ ದೇಶಗಳಲ್ಲಿ ನೋಟುಗಳ ಮೇಲೆ ಅಲ್ಲಿನ ವಿವಿಧ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸಲಾಗುತ್ತಿದೆ. ಆದರೆ ಭಾರತದಲ್ಲಿ ಮಹಾತ್ಮಗಾಂಧಿ ಹೊರತುಪಡಿಸಿದರೆ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ನೋಟುಗಳು ಮುದ್ರಣಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟುಗಳ ಮೇಲೆ ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರ, ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರ ತಿಲಕ್, ಭಗತ್ ಸಿಂಗ್, ಲಾಲಾ ಲಜಪತರಾಯ್, ಛತ್ರಪತಿ ಶಿವಾಜಿ, ಅಂಬೇಡ್ಕರ್ರವರಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರ ಮುದ್ರಿಸುವಂತೆ ಆಗ್ರಹಿಸಿದರು.
ನಾಣ್ಯಗಳ ಮುದ್ರಣದಲ್ಲಿ ಕೇಂದ್ರಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಕರ್ನಾಟಕದ ಬಸವೇಶ್ವರ, ಕವಿ ಮುದ್ದಣ ಮತ್ತು ಮೈಸೂರು ವಿವಿ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರದ ನಾಣ್ಯಗಳನ್ನು ಮಾತ್ರವೇ ಬಿಡುಗಡೆ ಮಾಡಿದ್ದು, ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮಹಾನ್ ವ್ಯಕ್ತಿಗಳ ನಾಣ್ಯಗಳ ಬಿಡುಗಡೆ ಬೆರಳೆಣಿಕೆಯಷ್ಟು ಇಲ್ಲ ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ.
ಕೂಡಲೇ ಮೇಲ್ಕಂಡ ಮಹಾನ್ ವ್ಯಕ್ತಿಗಳ ನಾಣ್ಯಗಳನ್ನು ಚಲಾವಣೆಗೆ ಬಿಡುಗಡೆ ಮಾಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ನ್ಯಾಯವೊದಗಿಸುವಂತೆ ಆಗ್ರಹಿಸಿದರು..
