ಉಡುಪಿ ನಗರದಲ್ಲಿ ಬೀದಿ ಶ್ವಾನಗಳ ಸಂಖ್ಯೆಯು ಮಿತಿ ಮಿರಿದ್ದು, ಬೀದಿ ನಾಯಿಗಳ ಹೆಚ್ಚಳದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆಗಳು ಉದ್ಭವಿಸಿವೆ. ಪ್ರತಿ ಜೀವಿಗಳಿಗೆ ಬದುಕುವ ಹಕ್ಕಿದೆ. ಅವುಗಳ ಬದುಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಅವುಗಳು ಬದುಕಲು ಪೂರಕ ವ್ಯವಸ್ಥೆ ಕಲ್ಪಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ಅದರಂತೆ ಬೀದಿ ನಾಯಿಗಳಿಗೆ ಜಿಲ್ಲಾಡಳಿತ, ನಗರಾಡಳಿತವು ನಗರದ ಹೊರ ವಲಯದಲ್ಲಿ ಆಯಕಟ್ಟಿನ ಸ್ಥಳವನ್ನು ಗುರುತಿಸಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸ ಬೇಕು. ಆಶ್ರಯ ಪಡೆದಿರುವ ಬೀದಿ ನಾಯಿಗಳಿಗೆ ಊಟೋಪಚಾರ, ಔಷಧೋಪಚಾರ, ಆರೈಕೆಯ ವ್ಯವಸ್ಥೆಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.
ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ, ರಥಬೀದಿ, ನಗರದ ಚಿತ್ತರಂಜನ್ ವೃತ್ತ, ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ನರ್ಮ್ ಬಸ್ಸು ನಿಲ್ದಾಣ, ಸರಕಾರಿ ಹಳೆ ಮತ್ತು ಹೊಸ ಬಸ್ಸು ನಿಲ್ದಾಣ, ಜಿಲ್ಲಾಸ್ಪತ್ರೆಯ ವಠಾರ, ಅಜ್ಜರಕಾಡು ಉದ್ಯಾನವನ, ಮಹತ್ಮಾಗಾಂಧಿ ಕ್ರೀಡಾಂಗಣ, ಬೀಡಿನಗುಡ್ಡೆ ಬಯಲು ರಂಗ ಮಂದಿರ, ಮೀನು ಮಾರುಕಟ್ಟೆ, ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ, ಇಂದ್ರಾಳಿಯ ರೈಲು ನಿಲ್ದಾಣ, ಹೀಗೆ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಹೊರ ವಲಯದಲ್ಲೂ ಬೀದಿ ನಾಯಿಗಳ ಗುಂಪೇ ನೆಲೆಪಡೆದಿವೆ.
ನಾಯಿಗಳು ನಡುರಸ್ತೆಯಲ್ಲಿ ಸಂಚರಿಸುವುದರಿಂದ ವಾಹನ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಸಾರ್ವಜನಿಕರನ್ನು ಅಟ್ಟಿಸಿಕೊಂಡು ಬರುವ ಕಚ್ಚುವ ಪ್ರಕರಣಗಳು ಆಗಾಗ ಸಂಭವಿಸತ್ತಲೇ ಇರುರುತ್ತವೆ. ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಗಳು ಎದುರಾದಂತೆ, ಮಾನವ ಪೋಷಣೆಯಲ್ಲಿ ಬದುಕಬೇಕಾದ ನಾಯಿಗಳು, ಪೋಷಕರಿಲ್ಲದೆ ಬೀದಿನಾಯಿಗಳಾಗಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಿವೆ. ಆಹಾರದ ಕೊರತೆಯು ಎದುರಾಗಿದೆ. ಪ್ರಾಣಿಪ್ರಿಯರು ಉಣಬಡಿಸಿದ ಬಿಸ್ಕೆಟ್ಟೇ ಅವುಗಳಿಗೆ ಅರೆಹೊಟ್ಟೆ ಆಹಾರವಾಗಿದೆ. ಅಲ್ಲದೆ ವಾಹನ ಅಪಘಾತದಿಂದ ಗಾಯಾಳಾಗಿ, ಅಂಗನೂನ್ಯತೆಯಿಂದ ಅಸಹಾಯಕವಾಗಿ ಬದುಕಬೇಕಾದ ಪರಿಸ್ಥಿತಿ ಬೀದಿ ನಾಯಿಗಳದಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ವ್ಯವಸ್ಥೆ ಅವುಗಳಿಗಿಲ್ಲ. ವಿಘ್ನಸಂತೋಷಿಗಳಿಂದ ಕಲ್ಲೇಸತದ ಪೆಟ್ಟುತಿನ್ನಬೇಕಾದ ಪರಿಸ್ಥಿತಿಯು ಇದೆ. ಬೀದಿ ನಾಯಿಗಳಿಂದ ಸಾರ್ವಜನಿಕರಿಗೂ ತೊಂದರೆ ಒಂದೆಡೆಯಾದರೆ, ಬೀದಿ ನಾಯಿ ಪಟ್ಟದಿಂದಾಗಿ ಅವುಗಳ ಬದುಕು ಕೂಡ ಅಸಹಾಯಕವಾಗಿದೆ. ಎದುರಾಗಿರುವ ಸಮಸ್ಯೆ ಬಗೆಹರಿಸಲು “ಬೀದಿ ಶ್ವಾನಗಳ ಪುರ್ನವಸತಿ ಕೇಂದ್ರ” ಸ್ಥಾಪನೆಯೇ ಉತ್ತರವಾಗಿದೆ. ಜಿಲ್ಲಾಡಳಿತ, ನಗರಾಡಳಿತ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನಹರಿಸಬೇಕಾಗಿದೆ.