ರಾಷ್ಟ್ರೀಯ ಜನತಾ ದಳದ ಸಾಂಪ್ರದಾಯಿಕ ಮತದಾರರ ಹೆಸರುಗಳನ್ನು ಪರಿಷ್ಕರಣೆಯ ನೆಪದಲ್ಲಿ ತೆಗೆದು ಹಾಕಲಾಗುತ್ತಿದೆ ಎಂದು ಬಿಹಾರದ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತ ಪರಿಷ್ಕರಣೆ ಬಗ್ಗೆ ಕಿಡಿಕಾರಿರುವ ಅವರು, ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿಯೇ ಪ್ರತಿಪಕ್ಷವನ್ನು, ವಿಶೇಷವಾಗಿ ಆರ್ಜೆಡಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿಶೇಷ ಸಮಗ್ರ ಮತ ಪರಿಷ್ಕರಣೆ ಎನ್ನುವುದು ಒಂದು ಪಿತೂರಿ. ಸಾಂಪ್ರದಾಯಿಕ ರಾಷ್ಟ್ರೀಯ ಜನತಾ ದಳದ ಮತದಾರರ ಹೆಸರುಗಳನ್ನು ಪರಿಷ್ಕರಣೆಯ ನೆಪದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಹೀಗೆ ಮಾಡುವ ಮೂಲಕ ಭಾರತೀಯ ಚುನಾವಣಾ ಆಯೋಗವು ಆಡಳಿತಾರೂಢ ಪಕ್ಷದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚಿಸಲಾಗಿದೆ. ನಮ್ಮ ಮತದಾರರನ್ನು ಗುರಿಯಾಗಿಸಿಕೊಂಡು ಆಯೋಗವು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದನ್ನೆಲ್ಲ ನೋಡಿದರೆ ಚುನಾವಣೆ ನಡೆಸುವುದೇ ಅರ್ಥಹೀನ ಎಂದು ಅನ್ನಿಸುತ್ತದೆ ಎಂದು ತೇಜಸ್ವಿ ಯಾದವ್ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹದಾಯಿ: ನಾಯಕರೇ ನಾಡದ್ರೋಹಿಗಳು
ಚುನಾವಣೆಗಳನ್ನು ಬಹಿಷ್ಕರಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಹಿಷ್ಕಾರ ಒಂದು ಆಯ್ಕೆ. ಆದರೆ, ಈ ಬಗ್ಗೆ ಮೈತ್ರಿಕೂಟದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಕೊಳ್ಳಲಾಗುತ್ತದೆ. ಅಲ್ಲದೇ ಈ ಕುರಿತು ಸಾರ್ವಜನಿಕವಾಗಿಯೂ ಪ್ರಕಟಿಸಲಾಗುವುದು. ಇದೇ ಪರಿಸ್ಥಿತಿ ಮುಂದುವರಿದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ತೇಜಸ್ವಿ ಯಾದವ್, ಯಾರಿಗೆ ಎಷ್ಟು ಸ್ಥಾನಗಳು ಸಿಗುತ್ತವೆ ಎಂಬುದರ ಕುರಿತು ಚುನಾವಣೆಗೂ ಮುನ್ನ ಎಲ್ಲವೂ ಈಗಲೇ ಸಿದ್ಧವಾಗಿದ್ದರೆ, ಚುನಾವಣೆ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗ ಇತ್ತೀಚಿಗೆ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದರಲ್ಲಿ 52-55 ಲಕ್ಷ ಮತದಾರರು (ಅವರ ವಿಳಾಸದಲ್ಲಿ) ಕಂಡುಬಂದಿಲ್ಲ ಎಂದು ಹೇಳಿದೆ. ಇದನ್ನು ಗಮನಿಸಿದರೆ ಈ ಮತದಾರರ ಹೆಸರುಗಳ ಪರಿಷ್ಕರಣಾ ಪ್ರಕ್ರಿಯೆ ಕೇವಲ ಔಪಚಾರಿಕ ಅಂತ ಅನ್ನಿಸುತ್ತಿದೆ. ಅಲ್ಲದೇ ಇಲ್ಲಿ ಯಾವುದೇ ಪಾರದರ್ಶಕತೆ ಉಳಿದಿಲ್ಲ ಎಂಬ ಅನುಮಾನ ಕೂಡ ಕಾಡುತ್ತಿದೆ. ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳು ಅಳಿಸಿಹೋದದ್ದೇ ಆದಲ್ಲಿ ತಮ್ಮ ಪಡಿತರ ಮತ್ತು ಪಿಂಚಣಿ ನಿಲ್ಲಬಹುದು ಎಂಬ ಚಿಂತೆಯಲ್ಲಿದ್ದಾರೆ. ಮೊದಲು ಮತದಾರರು ಸರ್ಕಾರಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈಗ ಸರ್ಕಾರ ಮತದಾರರನ್ನು ಆಯ್ಕೆ ಮಾಡುತ್ತಿದೆ. ಚುನಾವಣಾ ಆಯೋಗದ ಮೂಲಕ ಇದನ್ನೆಲ್ಲ ಹೀಗೆ ಮಾಡಲಾಗುತ್ತಿದೆ ಎಂದು ತೇಜಸ್ವಿ ಯಾದವ್ ಗಂಭೀರ ಆರೋಪ ಮಾಡಿದರು.