ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ರಂಗಾಯಣ ಕಲಬುರಗಿ ಸಹಯೋಗದಲ್ಲಿ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ʼರಂಗಗೀತೆಗಳ ಗಾಯನ ಹಾಗೂ ʼರಮಾಬಾಯಿ ಅಂಬೇಡ್ಕರ್ʼ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಬೀದರ್ ನಗರದ ರಂಗಮಂದಿರದಲ್ಲಿ ಕರೆದ ಜಿಲ್ಲೆಯ ಕಲಾವಿದರ ಸಭೆಯಲ್ಲಿ ಮಾತನಾಡಿದ ಅವರು, ʼಅಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಬೀದರ್ನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಅವರ ತಂಡದಿಂದ ರಂಗಗೀತೆ ಗಾಯನ ನಡೆಯಲಿದೆ. ಬಳಿಕ ಡಾ.ಸಿದ್ರಾಮ ಕಾರಣಿಕ ಅವರ ರಚನೆಯ ರಮಾಬಾಯಿ ಅಂಬೇಡ್ಕರ್ ಅವರ ನಾಟಕವನ್ನು ಡಾ.ಮಲ್ಲಿಕಾರ್ಜುನ ದೊಡ್ಡಮನಿ ನಿರ್ದೇಶನದಲ್ಲಿ ಕಲಬುರಗಿಯ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘ ತಂಡದವರಿಂದ ನಾಟಕ ಪ್ರದರ್ಶಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಲಾವಿದರ ಏಳಿಗೆಗೆ ರಂಗಾಯಣ ಶ್ರಮಿಸಲಿದೆ : ಡಾ.ಸುಜಾತಾ ಜಂಗಮಶೆಟ್ಟಿ
ಕಲಾವಿದರ ಏಳಿಗೆಗೆ ರಂಗಾಯಣ ಸದಾ ಶ್ರಮಿಸಲಿದೆ. ಕಲಾವಿದರು ತಮ್ಮ ಪರಿಶ್ರಮದೊಂದಿಗೆ ಕಲಾಪ್ರದರ್ಶಿಸಬೇಕು. ವೇಷ ಭೂಷಣ, ವಾದ್ಯಗಳು ಇನ್ನಿತರ ಪರಿಕರಗಳೊಂದಿಗೆ ಉತ್ತಮ ಕಲೆ ಪ್ರಸ್ತುತಪಡಿಸಿದಾಗ ಮಾತ್ರ ಸರ್ಕಾರ ಅದಕ್ಕೆ ತಕ್ಕ ಸಂಭಾವನೆ ನೀಡುತ್ತದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಶಾಲಾ ರಂಗಭೂಮಿ ಮತ್ತು ಕಾಲೇಜು ರಂಗಭೂಮಿ ಕ್ರಿಯಾಶೀಲವಾಗುವಂತೆ ಶಾಲಾ-ಕಾಲೇಜುಗಳಲ್ಲಿ ನಾಟಕ ಪ್ರದರ್ಶನ, ರಂಗಗೀತೆಗಳ ಬಗ್ಗೆ ತರಬೇತಿ ನೀಡಲಾಗುವುದು. ಅಲ್ಲಿಂದಲೇ ಕಲಾ ರಂಗಭೂಮಿ ಹುಟ್ಟಿಕೊಳ್ಳುತ್ತದೆ. ಅಲ್ಲಿಯೇ ನಾಟಕ ನಿರ್ದೇಶಕರು, ನಟರು ಮತ್ತು ನಾಟಕರಾರರು ಸಿಗುತ್ತಾರೆ ಎಂದು ಹೇಳಿದರು.
ʼಆಧುನಿಕ ಕಾಲಘಟ್ಟದ ಇಂದಿನ ತಂತ್ರಜ್ಞಾನ ಯುಗದಲ್ಲಿ ನಾಟಕ ವೀಕ್ಷಣೆಗೆ ಜನರನ್ನು ರಂಗಭೂಮಿ ಕಡೆಗೆ ಹೇಗೆ ಆಕರ್ಷಿಸಬೇಕೆಂಬ ಕುರಿತು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಲ್ಲಿರುವ ಕಲಾವಿದರನ್ನು ಗುರುತಿಸಿ, ಒಂದು ನಾಟಕ ನಿರ್ಮಿಸಿ ಏಳು ಜಿಲ್ಲೆಯ ಜನರು ನಾಟಕ ವೀಕ್ಷಿಸುವಂತೆ ಮಾಡಲಾಗುತ್ತಿದೆʼ ಎಂದರು.
ʼಕಲಾವಿದರಿಗೆ ಅನುದಾನದ ಕೊರತೆ, ರಂಗಾಯಣ ವತಿಯಿಂದ ಅರ್ಹ ಕಲಾವಿದರಿಗೆ ನಾಟಕ ಪ್ರದರ್ಶನ ಮಾಡಲು ಸೂಚಿಸುವುದು
ಮತ್ತು ಪ್ರತಿ ವರ್ಷ ನಾಟಕಗಳನ್ನು ಪ್ರದರ್ಶನ ಮಾಡುವುದು ಸೇರಿದಂತೆ ಇಂದಿನ ಸಭೆಯಲ್ಲಿ ಕಲಾವಿದರು ಸಲಹೆ ಸೂಚನೆ ನೀಡಿದ್ದಾರೆ. ಅವುಗಳನ್ನು ಗಂಭಿರವಾಗಿ ಪರಿಗಣಿಸಿ ರಂಗಾಯಣ ವತಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಕಲಾವಿದರಿಗೆ
ಪ್ರೋತ್ಸಾಹ ನೀಡಲಾಗುವುದುʼ ಎಂದು ಭರವಸೆ ನೀಡಿದರು.
ಬೀದರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ʼಸಂಚಾರಿ ಕಲಾವಿದರಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28 ಆಗಿದ್ದು, ಇನ್ನೂ ಹತ್ತು ದಿನಗಳ ಕಾಲ ಮುಂದೂಡುವ ಸಾಧ್ಯತೆಯಿದೆ. ಆಸಕ್ತ ಕಲಾವಿದರ ಆನ್ಲೈನ್ ಅರ್ಜಿ ಭರ್ತಿ ಮಾಡಬೇಕು. ಆಯ್ಕೆಯಾದ ಕಲಾವಿದರಿಂದ ಒಂದು ನಾಟಕ ನಿರ್ಮಿಸಿ, ಇಡೀ ರಾಜ್ಯದಾದ್ಯಂತ ಆ ನಾಟಕ ಪ್ರದರ್ಶನ ಮಾಡಿಸಲಾಗುವುದು. ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ನಾಳೆ ಬಸವಕಲ್ಯಾಣದಲ್ಲಿ ʼಶರಣ ತತ್ವ ಶಿಬಿರʼ
ಸಭೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಕರ್ನಾಟಕ ವನ್ಯ ಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಹಾಗೂ ಪ್ರಮುಖರಾದ ಎಸ್.ಬಿ.ಕುಚಬಾಳ, ಶಂಭುಲಿಂಗ ವಾಲ್ದೊಡ್ಡಿ, ಮಹೇಶ ಗೊರನಾಳಕರ, ರೇಖಾ ಸೌದಿ, ದಿಲೀಪ ಕಾಡವಾದ, ಶಂಕರ ಚೊಂಡಿ, ಪಾರ್ವತಿ ಸೋನಾರೆ ಸೇರಿದಂತೆ ಕಲಾವಿದರು ಉಪಸ್ಥಿತರಿದ್ದರು.
