“ರಾಜ್ಯದಲ್ಲಿ 22 ಲಕ್ಷ ಮಡಿವಾಳ ಜನಸಂಖ್ಯೆ, ದೇಶದಲ್ಲಿ 2.ಕೋಟಿ ಜನಾಂಗದವರಿದ್ದಾರೆ. ಈಗಾಗಲೇ, 17 ರಾಜ್ಯಗಳು ಪರಿಶಿಷ್ಟ ಜಾತಿಗೆ ಸೇರಿಸಿವೆ. ಇನ್ನು 11 ರಾಜ್ಯಗಳು ಪರಿಶಿಷ್ಟ ಜಾತಿಗೆ ಸೇರಿಸಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಯುತ್ತಲೇ ಇವೆ. ಆದರೂ, ಮೀಸಲಾತಿ ದೊರಕದೆ ಇರುವುದು ಬೇಸರದ ಸಂಗತಿ. ಮುಖ್ಯಮಂತ್ರಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪರಿಶಿಷ್ಟ ಜಾತಿಗೆ ಸೇರಿಸುವ ಭರವಸೆಯನ್ನ ನೀಡಬೇಕು” ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಡಿವಾಳ ಮಾಚಿದೇವ ಸೇನಾ ಯುವ ಪಡೆ ಕಾರ್ಯಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಒತ್ತಾಯಿಸಿದರು.

ಹೊಸದುರ್ಗ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರಾಜ್ಯ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆ ವತಿಯಿಂದ ಪ್ರತಿಭಾನ್ವಿತ ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ದಾವಣಗೆರೆ ಚಿತ್ರದುರ್ಗ ಅಂತರ್ ಜಿಲ್ಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ “ಮಡಿವಾಳ ಸಮಾಜ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದುಳಿದಿರುವುದು ಬೇಸರದ ಸಂಗತಿ. ಸಮಾಜ ಮುಂದೆ ಬರುವ ನಿಟ್ಟಿನಲ್ಲಿ ಯುವಕರು ಎಚ್ಚೆತ್ತುಕೊಳ್ಳಬೇಕಿದೆ. ಸಮಾಜವನ್ನ ಪರಿಶಿಷ್ಟ ಜಾತಿಗೆ ಸೇರಿಸುವ ವಿಚಾರದಲ್ಲಿ ಹಲವು ಬಾರಿ ಸರ್ಕಾರದ ಜೊತೆ ಸ್ವಾಮೀಜಿಯವರು, ಸಮುದಾಯದ ಮುಖಂಡರು, ಎಲ್ಲಾ ಸಂಘಗಳ ಜೊತೆ ಚರ್ಚಿಸಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನಕ ವಿದ್ಯಾಸಂಸ್ಥೆಯ ಡಾ.ಎಂ.ಹೆಚ್.ಕೃಷ್ಣಮೂರ್ತಿ “ಎಲ್ಲಾ ಸಮುದಾಯದವರಂತೆ ಮಡಿವಾಳ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ನಾಗತಿಹಳ್ಳಿ ಮಂಜುನಾಥ್ ಮತ್ತು ಅವರ ತಂಡ ನಿರಂತರವಾಗಿ 7 ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಸಮುದಾಯದ ಸಂಪೂರ್ಣ ಬೆಂಬಲ ಸಿಕ್ಕಾಗ, ಮತ್ತಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲು ಸಾಧ್ಯ” ಎಂದು ಶ್ಲಾಘಿಸಿದರು.

“ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅವಕಾಶಗಳು ತೆರೆದಿರುತ್ತವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂತಹ ಕಷ್ಟಗಳು ಬಂದರೂ ಕುಗ್ಗದೆ, ಸಿರಿ-ಸಂಪತ್ತು ಬಂದರೆ ಹಿಗ್ಗದೆ ಸಮಸ್ಥಿತಿಯಲ್ಲಿ ಜೀವನ ನಡೆಸಬೇಕು.ಬರೀ ಸರ್ಕಾರಿ ಕೆಲಸ ಸಿಗಲಿ ಎಂದು ಓದುವುದೇ ಸಾಧನೆಯಲ್ಲ. ಒಳ್ಳೆಯ ಸಂಸ್ಕಾರ, ನಡೆ-ನುಡಿಗಳು, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದು ಕೂಡ ಸಾಧನೆಯೇ ಆಗಿದೆ” ಅಭಿಮತ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ಶಾಂತಪ್ಪ ಮಾತನಾಡಿ, “ಜಾತಿ-ಜನಾಂಗಗಳ ಹೆಸರಿನಲ್ಲಿ ಬಹುಸಂಖ್ಯಾತರು ಪ್ರತಿಭಾ ಪುರಸ್ಕಾರ ಮಾಡುತ್ತಿದ್ದರು. ಆದರೀಗ, ಸಣ್ಣ-ಸಣ್ಣ ಸಮುದಾಯಗಳು ತಮ್ಮ ಸಮುದಾಯದ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಇಂತಹ ಸಭೆ-ಸಮಾರಂಭಗಳು ಭಾವೈಕ್ಯತೆಯನ್ನು ಮೂಡಿಸುತ್ತದೆ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕು. ಸನ್ಮಾನ ಸ್ವೀಕರಿಸಿದವರೂ, ಮುಂದೆ ಬೇರೆಯವರಿಗೆ ಸನ್ಮಾನಿಸುವಂತಾಗಬೇಕು “ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ನಿಸ್ವಾರ್ಥ, ಸರ್ವಸಂಗಪರಿತ್ಯಾಗಿ ಸೈನಿಕರಿಂದ ಪ್ರಜೆಗಳಿಗೆ ನೆಮ್ಮದಿ; ಕಾರ್ಗಿಲ್ ವಿಜಯೋತ್ಸವದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು
ಕಾರ್ಯಕ್ರಮದಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಸೇನಾಪಡೆಯ ಅಧ್ಯಕ್ಷ ಮೀರಾಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಲಯ ಪಾಲಕಿ ವಿಜಯಲಕ್ಷ್ಮಿ, ರಾಜೇಶ್, ತಿಪ್ಪೇಸ್ವಾಮಿ ಭಾಗವಹಿಸಿದ್ದರು. ಅರಿವು, ಜಾಗೃತಿ ಮತ್ತು ಸಂಘಟನೆ ಕುರಿತು ಹಿರಿಯ ಪತ್ರಕರ್ತ ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು. ಬೆನಕನಹಳ್ಳಿ ಶಿವಣ್ಣ, ಚಂದ್ರ ಕಲಾವಿದ, ಪುರಸಭಾ ಮಾಜಿ ಸದಸ್ಯ ರಾಮಚಂದ್ರಪ್ಪ ಮತ್ತು ತೊಣಚೇನಹಳ್ಳಿ ಗಿರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.